ತುಮಕೂರು : ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಡಳಿತ ಚುಕ್ಕಾಣಿ ಹಿಡಿದ 12 ವರ್ಷಗಳಿಂದ ನಂತರ ದೇಶದಲ್ಲಿ 50 ವರ್ಷಗಳಷ್ಟು ಅಭಿವೃದ್ಧಿಯಾಗಿದೆ. ಮೋದಿ ಸರ್ಕಾರದ ಸಮರ್ಥ ನಾಯಕತ್ವದಲ್ಲಿ ವಿಶ್ವದ ೩ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಭಾರತ ದೃಢ ಹೆಜ್ಜೆ ಇಟ್ಟಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2014ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ದೂರದೃಷ್ಟಿ ಚಿಂತನೆ, ಕಲ್ಯಾಣ ಕಾರ್ಯಕ್ರಮಗಳ ಮೂಲಕ ದೇಶದಲ್ಲಿ ಈ 12 ವರ್ಷದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ ಎಂದರು.
ಬಡತನ ನಿರ್ಮೂಲನೆಗೆ ಕಾರ್ಯಕ್ರಮದಡಿಯಲ್ಲಿ ದೇಶದ 25 ಕೋಟಿ ಜನರನ್ನು ಬಡತನದಿಂದ ಹೊರಕ್ಕೆ ತರಲಾಗಿದೆ. ಪಿ.ಎಂ. ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ 81 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. 58 ಕೋಟಿ ಜನ್ ಧನ್ ಖಾತೆಗಳನ್ನು ತೆರೆದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಾಗಿದೆ. ಮನೆಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಜಲ ಜೀವನ್ ಮಿಷನ್ ಅಡಿಯಲ್ಲಿ 16 ಕೋಟಿ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದು ತಿಳಿಸಿದರು.
ಸಣ್ಣ ಉದ್ಯಮಿಗಳು ಮತ್ತು ಅಳಿವಿನ ಅಂಚಿನಲ್ಲಿರುವ ವರ್ಗಗಳನ್ನು ಉತ್ತೇಜಿಸಲು ಅಡಮಾನವಿಲ್ಲದ 57 ಕೋಟಿ ಮುದ್ರಾ ಸಾಲ ಯೋಜನೆ ಜಾರಿ, 74 ಲಕ್ಷ ಪಿ.ಎಂ ನಿಧಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಯೋಜನೆ ಜಾರಿ ಮಾಡಲಾಗಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಸಾಂಪ್ರದಾಯಕ ಕುಶಲಕರ್ಮಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಸಾಲದ ನೆರವು ನೀಡಲಾಗುತ್ತಿದೆ ಎಂದು ಸಚಿವ ಸೋಮಣ್ಣ ಹೇಳಿದರು.
ರೈತರ ಕಲ್ಯಾಣಕ್ಕಾಗಿ 4.3 ಲಕ್ಷ ಕೋಟಿ ರೂ. ಗಳನ್ನು ಪಿಎಂ ಕಿಸಾನ್ ಅಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಮಾಡಿದ್ದು ಪ್ರತಿ ಚೀಲ ಯೂರಿಯಾ 266 ರೂ. ಲಭ್ಯವಾಗುವಂತೆ ಮಾಡಲಾಗಿದೆ. ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ 12 ಲಕ್ಷಕ್ಕೂ ಹೆಚ್ಚಿನ ಮೆಟ್ರಿಕ್ ಟನ್ ದಾಖಲೆ ಮಾಡಲಾಗಿರುವುದು ಪ್ರಧಾನಿ ಮೋದಿ ಸರ್ಕಾರದ ಉತ್ತಮ ಆಡಳಿತದ ಫಲ ಎಂದರು.
ಭಾರತವು ವಿಶ್ವದ ಅತಿಹೆಚ್ಚು ಯುವಜನರನ್ನು ಹೊಂದಿರುವ ದೇಶ. ಯುವಜನರಿಗಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. 33.5 ಲಕ್ಷ ಕೋಟಿ ರೂ.ಗಳ 120 ಪ್ರಮುಖ ಸ್ಟಾರ್ಟ್ ಅಪ್ಗಳ ಸ್ಥಾಪನೆಗೆ ನೆರವು ನೀಡಲಾಗಿದೆ. 1.60 ಲಕ್ಷ ಕೋಟಿ ರೂ.ಗಳನ್ನು ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಹೂಡಿಕೆ ಮಾಡಲಾಗಿದೆ.
164 ವಂದೇ ಭಾರತ್ ರೈಲುಗಳು ಪ್ರಯಾಣವನ್ನು ಹೆಚ್ಚು ವೇಗ ಮತ್ತು ಸುಲಭಗೊಳಿಸಿವೆ. ಆರ್.ಆರ್.ಟಿ.ಎಸ್ ಹಾಗೂ ವಂದೇ ಭಾರತ್ ರೈಲುಗಳ ಮೂಲಕ ವಿಶ್ವದರ್ಜೆಯ ಬಹುಮಾದರಿ ಸಂಪರ್ಕ ವ್ಯವಸ್ಥೆ ನಿರ್ಮಾಣ ಬ್ರಾಡ್ ಗೇಜ್ ರೈಲು ಜಾಲದ ಶೇಕಡ 99.6ರಷ್ಟು ವಿದ್ಯುದೀಕರಣಗೊಂಡಿದೆ. 2025-26ರಲ್ಲಿ ಭಾರತದ ಜಿಡಿಪಿ ಸುಮಾರು 67 ರೂ. ಲಕ್ಷ ಕೋಟಿ ಆಗಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕೆ ನರೇಂದ್ರ ಮೋದಿಯವರ ಸರ್ಕಾರ ನಿರಂತರ ಅಭಿವೃದ್ಧಿ ಎಂಬ ಪ್ರವಾಹವು ವಿಕಸಿತ ಭಾರತ ನಿರ್ಮಾಣದ ಅಚಲ ಸಂಕಲ್ಪದಿಂದ ಮತ್ತಷ್ಟು ವೇಗವಾಗಿ ಮುಂದುವರೆಯುತ್ತಿದೆ ಎಂದು ಸಚಿವ ಸೋಮಣ್ಣ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಎಸ್.ಡಿ. ದಿಲೀಪ್ಕುಮಾರ್, ಭೈರಣ್ಣ, ಶಿವಕುಮಾರ್, ಹೆಚ್.ಎಂ. ರವೀಶಯ್ಯ, ರುದ್ರೇಶ್, ವೇದಮೂರ್ತಿ, ಸಾಗರನಹಳ್ಳಿ ವಿಜಯಕುಮಾರ್, ಜೆ. ಜಗದೀಶ್ ಹಾಗೂ ವಿವಿಧ ಮೋರ್ಚಾಗಳ ಮುಖಂಡರು ಹಾಜರಿದ್ದರು.
Kshetra Samachara
16/06/2026 12:55 pm