ತುಮಕೂರು: ಶಾಲೆ ಬಿಟ್ಟ ನಂತರ ಸ್ನೇಹಿತರನ್ನು ಭೇಟಿ ಮಾಡುವುದೇ ಕಷ್ಟ ಅಂತಹುದರಲ್ಲಿ ಪ್ರೌಢಶಾಲೆಯಲ್ಲಿ ಕಲಿತ ಎಲ್ಲಾ ಸ್ನೇಹಿತರನ್ನು ಕಲೆ ಹಾಕಿ ತಮಗೆ ವಿದ್ಯಾಭ್ಯಾಸ ಕಲಿಸಿದ ಗುರುಗಳಿಗೆ ಗುರುವಂದನೆ ಅರ್ಪಿಸಿ ಧನ್ಯತೆ ಮೆರೆದ ಭಾವನಾತ್ಮಕ ಕ್ಷಣಕ್ಕೆ ಊರುಕೆರೆಯ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಯಿತು.
ಊರುಕೆರೆ ಸರ್ಕಾರಿ ಪ್ರೌಢಶಾಲೆಯ 1998-99 ನೇ ಸಾಲಿನಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಎಲ್ಲಾ ವಿದ್ಯಾರ್ಥಿಗಳು 26 ವರ್ಷಗಳ ನಂತರ ಸ್ನೇಹಸಮ್ಮಿಲನ ಹೆಸರಲ್ಲಿ ಒಂದೇ ವೇದಿಕೆಯಡಿ ಸೇರಿ ಕಷ್ಟ ಸುಖ ಹಾಗೂ ಶಾಲಾ ದಿನಗಳನ್ನು ನೆನಪಿಸಿಕೊಂಡು ಸಂಭ್ರಮಿಸಿದರು.
ಶಾಲಾ ದಿನಗಳಲ್ಲಿ ತುಂಟಾಟ ಮಾಡಿ ಶಿಕ್ಷಕರಿಂದ ಒದೆ ತಿಂದದ್ದು,ಶಾಲೆಗೆ ಚಕ್ಕರ್ ಹಾಕಿದ ದಿನಗಳು,ಸ್ನೇಹಿತರೊಂದಿಗೆ ಜಗಳ ಆಡಿದ್ದು ಎಲ್ಲಾ ಅಮೂಲ್ಯ ಕ್ಷಣಗಳನ್ನು ಸ್ನೇಹಿತರೆಲ್ಲಾ ಮೆಲಕು ಹಾಕಿದರು.
ಪ್ರೌಢಶಾಲಾ ದಿನಗಳಲ್ಲಿ ಸ್ಟ್ರಿಕ್ಟ್ ಪ್ರಾಂಶುಪಾಲರಾದ ಗೋವಿಂದರಾಜು ಅವರು ವಿದ್ಯಾರ್ಥಿಗಳಲ್ಲಿ ಇಟ್ಟಿದ್ದ ಭಯವನ್ನು 26 ವರ್ಷಗಳ ಬಳಿಕವೂ ವಿದ್ಯಾರ್ಥಿಗಳೆಲ್ಲರೂ ನೆನಪಿಸಿಕೊಂಡರು.
ತಮ್ಮ ಶಾಲಾ ದಿನಗಳಲ್ಲಿ ಸಹಪಾಟಿಗಳಾಗಿದ್ದು ಮೃತಪಟ್ಟಿರುವ ಸ್ನೇಹಿತರಿಗೆ ಹಾಗೂ ಶಿಕ್ಷಕರಿಗೆ ಇದೇ ವೇಳೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ನರಸಾಪುರಹರೀಶ್,ಲಕ್ಷ್ಮೀಕಾಂತ್,ಗಿರೀಶ್,ಮಂಜುಳ ಹಾಗೂ ಇತರೆ ಎಲ್ಲರೂ ಶ್ರಮ ಹಾಕಿ ಸ್ನೇಹಿತರೆಲ್ಲರ ವಿಳಾಸ ಕಲೆ ಹಾಕಿ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸ್ನೇಹಸಮ್ಮಿಲನಕ್ಕೆ ಅಭೂತಪೂರ್ವ ಅರ್ಥ ಕಲ್ಪಿಸಿದರು.
ತಮಗೆ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕರೂ ಸೇರಿದಂತೆ 25 ಕ್ಕೂ ಹೆಚ್ಚು ಶಿಕ್ಷಕರು ಶಾಲಾ ಸಿಬ್ಬಂದಿಗೆ ಗುರುವಂದನೆ ಹಾಗೂ ಅಭಿನಂದನೆ ಸಲ್ಲಿಸಲಾಯಿತು.
ಗುರುವಂದನೆ ಸ್ವೀಕರಿಸಿದ ಶಿಕ್ಷಕರೂ ಸಹ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರಲಿ ಎಂದು ಮನಸಾರೆ ಹರಸಿದರು.
ಇದೇ ವೇಳೆ ಪ್ರೌಢಶಾಲೆ ಮಕ್ಕಳಿಗೆ ಬ್ಯಾಡ್ಜ್,ಟೈ ವಿತರಿಸಲಾಯಿತು,ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ವೇದಿಕೆಯಲ್ಲಿ ಅಭಿನಂದಿಸಲಾಯಿತು.
PublicNext
13/06/2026 07:07 pm