ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರೀಕ್ಷಾ ಆಕ್ರೋಶದ ಮಹಾಸ್ಫೋಟ: ಪಾಟ್ನಾದಲ್ಲಿ ಹಿಂಸಾಚಾರ, ಪೊಲೀಸರ ಲಾಠಿ- ಗುಂಡುಗಳ ಪ್ರಹಾರ.!

ಪಾಟ್ನಾ: ಬಿಹಾರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳ ಪ್ರತಿಭಟನೆ ಪಾಟಲಿಪುತ್ರ ರೈಲ್ವೇ ನಿಲ್ದಾಣದಲ್ಲಿ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷಾ ಅಭ್ಯರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದ್ದಲ್ಲದೆ, ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿ, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಪ್ರಹಾರ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಪರೀಕ್ಷೆಗೆ ತೆರಳಲು ಸೂಕ್ತ ಪ್ರಯಾಣ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶಗೊಂಡಿದ್ದ ಅಭ್ಯರ್ಥಿಗಳು ನಿಲ್ದಾಣದಲ್ಲಿ ಕಲ್ಲು ತೂರಾಟ ನಡೆಸಿದರು. ರೈಲು ಹಳಿಗಳ ಮೇಲೆ ಇಳಿದು ರೈಲು ಸಂಚಾರಕ್ಕೆ ಸಂಪೂರ್ಣ ಅಡ್ಡಿಪಡಿಸಿದರು. ಪರೀಕ್ಷಾರ್ಥಿಗಳಿಗಾಗಿಯೇ ಬಿಟ್ಟಿದ್ದ 'ಎಕ್ಸಾಂ ಸ್ಪೆಷಲ್' ರೈಲನ್ನು ಪ್ರತಿಭಟನಾಕಾರರು ಜಖಂಗೊಳಿಸಿದರು. ಪದೇ ಪದೇ ರೈಲುಗಳ ಎಮರ್ಜೆನ್ಸಿ ಚೈನ್ ಎಳೆದು ಸೇವೆಗೆ ಅಡ್ಡಿಪಡಿಸಿದ್ದಲ್ಲದೆ, ಅಧಿಕಾರಿಗಳಿಗೂ ಮುತ್ತಿಗೆ ಹಾಕಿದಾಗ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಹಳಿಗಳಿಂದ ಕದಲಲು ನಿರಾಕರಿಸಿದ ಪ್ರತಿಭಟನಾಕಾರರು, ಪೊಲೀಸರ ಮೇಲೆಯೇ ಭಾರಿ ಕಲ್ಲು ತೂರಾಟ ನಡೆಸಿದರು. ಈ ಕಲ್ಲು ತೂರಾಟದಲ್ಲಿ ಪಾಟ್ನಾ ವಲಯದ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಜಿತೇಂದ್ರ ರಾಣಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ.

ಈ ಗಲಾಟೆಯ ಪರಿಣಾಮವಾಗಿ ರೈಲ್ವೇ ಆಸ್ತಿಪಾಸ್ತಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಭಾನುವಾರ ಬೆಳಿಗ್ಗೆ ಲಭ್ಯವಾದ ದೃಶ್ಯಗಳಲ್ಲಿ, ನಿಲ್ದಾಣದ ಆವರಣ ಪೂರ್ತಿ ಕಲ್ಲುಗಳು ಚದುರಿ ಬಿದ್ದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಗಲಾಟೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

"ಪ್ರತಿಭಟನಾಕಾರರ ಗುಂಪಿನಲ್ಲಿ ಕೆಲವು ಸಮಾಜವಿರೋಧಿ ಶಕ್ತಿಗಳು ನುಸುಳಿದ್ದೇ ಈ ಹಿಂಸಾಚಾರಕ್ಕೆ ಕಾರಣ" ಎಂದು ಪಾಟ್ನಾ ಜಿಲ್ಲಾಧಿಕಾರಿ ಡಾ. ತ್ಯಾಗರಾಜನ್ ಹೇಳಿದ್ದಾರೆ. ಅಭ್ಯರ್ಥಿಗಳ ಮನವಿಯಂತೆ ವಿಶೇಷ ರೈಲುಗಳನ್ನು ನಿಲ್ದಾಣದಲ್ಲಿ ಸಿದ್ಧಪಡಿಸಲಾಗಿತ್ತು ಎಂದೂ ಅವರು ಮಾಹಿತಿ ನೀಡಿದರು.

ಬಿಹಾರದ 38 ಜಿಲ್ಲೆಗಳಲ್ಲಿ ಭಾನುವಾರ ನಡೆಯಬೇಕಿದ್ದ ಬಿಹಾರ ಪೊಲೀಸ್ ಪ್ರೊಹಿಬಿಷನ್, ಜೈಲ್ ವಾರ್ಡರ್ ಮತ್ತು ಮೊಬೈಲ್ ಸ್ಕ್ವಾಡ್ ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆಯ ಮುನ್ನಾದಿನ ಈ ದೊಡ್ಡ ಗಲಾಟೆ ನಡೆದಿದೆ. ಸುಮಾರು 200-250 ವಿದ್ಯಾರ್ಥಿಗಳು ರೈಲುಗಳನ್ನು ತಡೆದಿದ್ದರು. ಪೊಲೀಸರು, ಆರ್‌ಪಿಎಫ್ (ರೈಲ್ವೆ ಸಂರಕ್ಷಣಾ ಪಡೆ), ಜಿಆರ್‌ಪಿ (ಸರ್ಕಾರಿ ರೈಲ್ವೆ ಪೊಲೀಸ್) ಮತ್ತು ಜಿಲ್ಲಾ ಪೊಲೀಸ್ ಪಡೆಗಳೊಂದಿಗೆ ಸೇರಿ ದಾರಿ ತೆರವುಗೊಳಿಸಲು ಮನವೊಲಿಸಲು ಪ್ರಯತ್ನಿಸಿದಾಗ, ಅವರಲ್ಲಿ ಕೆಲವರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಜೀವ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಯಲು ಪೊಲೀಸರು ಅಗತ್ಯ ಕ್ರಮ ಕೈಗೊಂಡರು. ಪೊಲೀಸ್ ಕ್ರಮದ ನಂತರ, ಜನಸಮೂಹವನ್ನು ಚದುರಿಸಲಾಯಿತು ಮತ್ತು ಈಗ ಎಲ್ಲಾ ರೈಲುಗಳು ಮತ್ತೆ ಎಂದಿನಂತೆ ಓಡುತ್ತಿವೆ ಎಂದು ಐಜಿ ಜಿತೇಂದ್ರ ರಾಣಾ ತಿಳಿಸಿದ್ದಾರೆ.

Edited By :
PublicNext

PublicNext

14/06/2026 09:25 pm

Cinque Terre

17.96 K

Cinque Terre

1