ಶಿವಮೊಗ್ಗ : ಮಲೆನಾಡು ಭಾಗದಿಂದ ಉತ್ತರ ಭಾರತದ ರಾಜ್ಯಗಳಿಗೆ ಅಡಿಕೆ ಸಾಗಿಸುತ್ತಿದ್ದ ಲಾರಿಗಳನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ಶಿವಮೊಗ್ಗ ಜಿಲ್ಲೆ ಹಾಗೂ ಶಿರಸಿ, ಸಿದ್ದಾಪುರ ಭಾಗದಿಂದ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ದೆಹಲಿಗೆ ಅಡಿಕೆ ಹೊತ್ತೊಯ್ಯುತ್ತಿದ್ದ ಸುಮಾರು 50 ಲಾರಿಗಳನ್ನು ಮಹಾರಾಷ್ಟ್ರದ ಬೀಡ್, ನಾಂದೇಡ್, ಔರಂಗಾಬಾದ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರಿಂದ ಕಂಗಾಲಾಗಿರುವ ಮ್ಯಾಮ್ಕೋಸ್ ಹಾಗೂ ಅಡಿಕೆ ಬೆಳೆಗಾರರ ನಿಯೋಗ ಇಂದು ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಅಡಿಕೆಯನ್ನು ಮಹಾರಾಷ್ಟ್ರದಲ್ಲಿ ಎಲ್ಲೂ ಮಾರಾಟ ಮಾಡುತ್ತಿಲ್ಲ, ಅದು ಕೇವಲ ಸಾಗಾಣಿಕೆ ಮಾರ್ಗದಲ್ಲಿದೆ. ಅಲ್ಲದೆ ಅಡಿಕೆ ನಿಷೇಧಿತ ಪದಾರ್ಥಗಳ ವರ್ಗಕ್ಕೆ ಸೇರದೆ ಇರುವುದರಿಂದ ಅಧಿಕಾರಿಗಳ ಕ್ರಮಕ್ಕೆ ಕಾನೂನು ಆಧಾರವಿಲ್ಲ ಎಂದು ನಿಯೋಗ ಸಂಸದರಿಗೆ ತಿಳಿಸಿತು.ಬೆಳೆಗಾರರ ಮನವಿ ಆಲಿಸಿದ ಮಾತನಾಡಿದ ಸಂಸದ ರಾಘವೇಂದ್ರ, ಅಡಿಕೆ ಈ ಭಾಗದ ರೈತರ ಬೆನ್ನೆಲುಬಾಗಿದ್ದು, ಲಾರಿಗಳ ಜಪ್ತಿಯಿಂದ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸಾಗಾಣಿಕೆಗೆ ಅಡ್ಡಿಪಡಿಸದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಈ ಹಿಂದೆ ಸೂಚನೆ ನೀಡಿದ್ದರೂ ಇಂತಹ ಘಟನೆ ಮರುಕಳಿಸಿದೆ. ವಶಪಡಿಸಿಕೊಂಡಿರುವ ವಾಹನಗಳ ಬೇಷರತ್ತು ಬಿಡುಗಡೆಗೆ ಹಾಗೂ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸಚಿವರು ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಅವರೊಂದಿಗೆ ತಕ್ಷಣ ಮಾತುಕತೆ ನಡೆಸಲಾಗುತ್ತದೆ” ಎಂದರು.
Kshetra Samachara
19/06/2026 06:49 pm