ಕಳಸ: ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಇಡೀ ಹಳ್ಳಿಯ ದಾಹ ನೀಗಿಸುತ್ತಿದ್ದ ನೀರಿನ ಮೂಲವೊಂದು ಈಗ ಬೇಲಿಯ ನಡುವೆ ಬಂಧಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಇಡಕಣಿ ಪಂಚಾಯಿತಿ ವ್ಯಾಪ್ತಿಯ ಕೋರೆ ಭಾಗದಲ್ಲಿ ಇಂತಹದ್ದೊಂದು ದುಃಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು ತೀವ್ರವಾಗಿ ಪರಿತಪಿಸುವಂತಾಗಿದೆ.
60 ವರ್ಷಗಳಿಂದ ಸಾರ್ವಜನಿಕರು ಬಳಸುತ್ತಿದ್ದ ಬಾವಿಗೆ ಸರ್ಕಾರದಿಂದ ಮೋಟಾರ್ ಅಳವಡಿಸಲಾಗಿದ್ದು ವಿದ್ಯುತ್ ಶುಲ್ಕವನ್ನು ಪಂಚಾಯಿತಿಯೇ ಪಾವತಿಸುತ್ತಿದೆ. ಆದರೆ ಇತ್ತೀಚೆಗೆ ಬಾವಿಗೆ ನೀರು ಬಿಡಲು ಹೋಗುವ ಕಾಲು ದಾರಿಗೆ ಅಡ್ಡಲಾಗಿ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಬೇಲಿ ನಿರ್ಮಿಸಿದ್ದಾರೆ.
ಇದರಿಂದಾಗಿ ಕುಡಿಯುವ ನೀರು ಬಿಡುವ ಮೋಟಾರ್ ಆನ್ ಮಾಡಲು ಹೋಗಲು ಸಾಧ್ಯವಾಗದೆ ಸಾರ್ವಜನಿಕರು ಹನಿ ನೀರಿಗೂ ಪರದಾಡುವಂತಾಗಿದೆ.
ಈ ಅಕ್ರಮ ಬೇಲಿಯಿಂದಾಗಿ ಕುಡಿಯುವ ನೀರಿಲ್ಲದೆ ಕಂಗಾಲಾಗಿರುವ ಕೋರೆ ಭಾಗದ ಗ್ರಾಮಸ್ಥರು ಒಟ್ಟಾಗಿ ಇಡಕಣಿ ಗ್ರಾಮ ಪಂಚಾಯಿತಿಗೆ ತೆರಳಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಲು ದಾರಿಗೆ ಅಡ್ಡಲಾಗಿ ಹಾಕಿರುವ ಬೇಲಿಯನ್ನು ತಕ್ಷಣವೇ ತೆರವುಗೊಳಿಸಿ ಸಾರ್ವಜನಿಕರಿಗೆ ನೀರು ಬಳಸಲು ಅನುವು ಮಾಡಿಕೊಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ಆಗ್ರಹಿಸಿದ್ದಾರೆ.
ಒಂದು ವೇಳೆ ಪಂಚಾಯಿತಿ ಕಡೆಯಿಂದ ಈ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದಲ್ಲಿ, ಸಾರ್ವಜನಿಕರೇ ನೇರವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.
PublicNext
20/06/2026 04:15 pm
LOADING...