ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ : ‘ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ’; ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಕಲಬುರಗಿ : ಬಿಡದಿ ವಿಚಾರವನ್ನು ಡೈವರ್ಟ್ ಮಾಡಲು ಜೈಲುಗಳ ಮೇಲೆ ದಾಳಿ ನಡೆಸಿಲ್ಲ. ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ಅದನ್ನು ನಾವು ಮಾಡಬಾರದಾ? ಪ್ರಜ್ವಲ್ ರೇವಣ್ಣ ನಿರಂತರವಾಗಿ ಫೋನ್‌ನಲ್ಲಿ ಮಾತನಾಡಿದ್ದು ಯಾರಿಗೆ? ಇಷ್ಟೆಲ್ಲ ಮಾತನಾಡುವವರು ಯಾಕೆ ಮಾಹಿತಿ ನೀಡಿಲ್ಲ? ಕುಟುಂಬದವರೊಂದಿಗೆ ತಾನೇ ಅವರು ಮಾತನಾಡಿದ್ದು. ಹಾಸನದಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಮೊದಲು ಆ ಕುಟುಂಬಗಳಿಗೆ ಕ್ಷಮೆ ಕೇಳಬೇಕು. ನೊಂದ ಹೆಣ್ಣುಮಕ್ಕಳ ಬಳಿ ಕ್ಷಮೆ ಕೇಳಲಿ ಎಂದು ಹೇಳಿದರು.

ವಿಜಯದಶಮಿಯಿಂದ ಯುದ್ಧ ಆರಂಭವಾಗಲಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, “ಅಲ್ಲೋಲ-ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ?” ಎಂದು ವ್ಯಂಗ್ಯವಾಡಿದರು.

“ನಮ್ಮ ಕುಟುಂಬವನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ” ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಯಾರು ಪ್ರಯತ್ನ ಮಾಡುತ್ತಿದ್ದಾರೆ? ನಾವೇಕೆ ಅದನ್ನು ಮಾಡೋಣ ಎಂದು ಪ್ರಶ್ನಿಸಿದರು.

ಟಿ. ನರಸೀಪುರ ಇನ್ಸ್‌ಪೆಕ್ಟರ್ ವಿರುದ್ಧದ ಹಳೆಯ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಅವರ ಮೇಲೆ ಇಲಾಖಾ ವಿಚಾರಣೆ ಆಗಿರಬೇಕು. ಅದಕ್ಕೂ ಇದಕ್ಕೂ ಏನು ಸಂಬಂಧ? ಗಣೇಶೋತ್ಸವದ ವಿಚಾರವಾಗಿ ಅವರ ಇಲಾಖೆಯ ಎಸ್‌ಒಪಿ ಹೇಳಬಾರದಾ? ಅವರ ಮೇಲೆ ಆರೋಪ ಇದ್ದರೆ ದೂರು ನೀಡಲಿ, ನಾವೇ ತನಿಖೆ ಮಾಡುತ್ತೇವೆ. ಅದು ಬಿಟ್ಟು ಆ ಮಾಜಿ ಸಂಸದರು ಏನಾದರೂ ಮಾಡಿದರೆ ನಡೆಯುತ್ತಾ? ಎಂದು ಪ್ರಶ್ನಿಸಿದರು.

“ನಮ್ಮ ಸಂಭ್ರಮ ಬೇರೆಯವರಿಗೆ ಆತಂಕ ಆಗಬಾರದು. ಎಲ್ಲರೂ ವಿಜೃಂಭಣೆಯಿಂದ ಹಬ್ಬ ಆಚರಿಸಿ. ಇವರಿಗೆ ಬೆಂಕಿ ಹಚ್ಚುವುದೇ ಕೆಲಸ” ಎಂದು ಕಿಡಿಕಾರಿದರು.

ಉಮರ್ ಖಾಲಿದ್ ಅವರನ್ನು ರಾಷ್ಟ್ರೀಯವಾದಿ ಎಂದು ಹರಿಪ್ರಸಾದ್ ಬಿಂಬಿಸುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಉಮರ್ ಖಾಲಿದ್ ಎಷ್ಟು ದಿನಗಳಿಂದ ಜೈಲಿನಲ್ಲಿದ್ದಾರೆ? ಯಾಕೆ ಕೇಂದ್ರ ಸರ್ಕಾರ ವಿಚಾರಣೆ ನಡೆಸುತ್ತಿಲ್ಲ? ವಿಚಾರಣೆ ನಡೆಸಿ ನ್ಯಾಯಾಲಯ ತೀರ್ಪು ನೀಡಲಿ. ಆಗ ಎಲ್ಲರೂ ಆತ ಅಪರಾಧಿ ಎಂದು ಒಪ್ಪಿಕೊಳ್ಳುತ್ತಾರೆ. ಬಿಜೆಪಿ ಹೇಳಿದರೆ ನಾವು ಒಪ್ಪಿಕೊಳ್ಳಬೇಕಾ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Edited By : PublicNext Desk
PublicNext

PublicNext

15/09/2026 04:46 pm

Cinque Terre

5.18 K

Cinque Terre

0

ಸಂಬಂಧಿತ ಸುದ್ದಿ