ಮೈಸೂರು : ಟಿ. ನರಸೀಪುರದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಬೆನ್ನಲ್ಲೇ ಸಂವಿಧಾನ ಸೌಹಾರ್ದ ರಥಯಾತ್ರೆ ನಡೆಸಲು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮುಂದಾಗಿದೆ. ಇದರಿಂದ ಪಟ್ಟಣದಲ್ಲಿ ಮತ್ತೊಂದು ಸಂಘರ್ಷದ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸುವಂತಾಗಿದೆ.
ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಾಗುವ ಮಾರ್ಗದಲ್ಲೇ ಸಂವಿಧಾನ ಸೌಹಾರ್ದ ರಥಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ. ನಾಳೆ ಮಧ್ಯಾಹ್ನ 3.30ಕ್ಕೆ ರಥಯಾತ್ರೆ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅನುಮತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಮಿತಿ ಮನವಿ ಸಲ್ಲಿಸಿದೆ.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್. ಭಾಸ್ಕರ್ ಅವರು ಎಸ್ಪಿಗೆ ಪತ್ರ ಬರೆದು ರಥಯಾತ್ರೆಗೆ ಅನುಮತಿ ನೀಡುವಂತೆ ಕೋರಿದ್ದಾರೆ.
ಗಣೇಶ ಶೋಭಾಯಾತ್ರೆ ಹಾಗೂ ಸಂವಿಧಾನ ಸೌಹಾರ್ದ ರಥಯಾತ್ರೆ ಒಂದೇ ರಸ್ತೆಯಲ್ಲಿ ಸಾಗುವ ಸಾಧ್ಯತೆ ಇರುವುದರಿಂದ ಟಿ. ನರಸೀಪುರದಲ್ಲಿ ಯಾತ್ರೆಗಳ ಪೈಪೋಟಿ ಹೊಸ ಚರ್ಚೆಗೆ ಕಾರಣವಾಗಿದೆ. ಎರಡು ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಯಾವ ರೀತಿಯ ಅನುಮತಿ ಹಾಗೂ ಮಾರ್ಗಸೂಚಿ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈಗಾಗಲೇ ಗಣೇಶ ಶೋಭಾಯಾತ್ರೆ ವಿಚಾರವಾಗಿ ಟಿ. ನರಸೀಪುರದಲ್ಲಿ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ, ಎರಡೂ ಯಾತ್ರೆಗಳು ಶಾಂತಿಯುತವಾಗಿ ನಡೆಯುವಂತೆ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
Kshetra Samachara
17/09/2026 02:34 pm
LOADING...