ಮೈಸೂರು : ಟಿ. ನರಸೀಪುರ ಗಣೇಶ ಮೆರವಣಿಗೆ ವಿವಾದದ ಬೆನ್ನಲ್ಲೇ ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆ ಕುರಿತ ವಿವಾದಕ್ಕೆ ಮತ್ತೊಂದು ತಿರುವು ದೊರೆತಿದೆ. ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆಯನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಟಿ. ನರಸೀಪುರದ ಸ್ಥಳೀಯ ಡಿಜಿಟಲ್ ವಾಹಿನಿಯ ಮಂಜು ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಜುನಾಥ್, ಸೆಪ್ಟೆಂಬರ್ 7ರಂದು ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಶಾಂತಿ ಸಭೆ ನಡೆಯಲಿದೆ. ಬಂದು ವರದಿ ಮಾಡುವಂತೆ ಠಾಣೆಯಿಂದಲೇ ತಮಗೆ ಕರೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಗಣೇಶ ಹಬ್ಬದ ಶಾಂತಿ ಸಭೆ ಮಾತ್ರವಲ್ಲದೆ, ಹಲವು ಪ್ರಕರಣಗಳ ಸಂದರ್ಭದಲ್ಲಿಯೂ ಠಾಣೆಗೆ ಕರೆಸಿ ಸುದ್ದಿಗಳನ್ನು ಮಾಡಿಸಲಾಗುತ್ತಿತ್ತು. ಇನ್ಸ್ಪೆಕ್ಟರ್ ಧನಂಜಯ್ ಅವರೇ ಮಾಧ್ಯಮದವರನ್ನು ಠಾಣೆಗೆ ಕರೆಸಿ ಘಟನೆಗಳ ಕುರಿತು ವರದಿ ಮಾಡಿಸುತ್ತಿದ್ದರು ಎಂದು ಮಂಜು ಆರೋಪಿಸಿದ್ದಾರೆ.
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದ ಬಳಿಕ ಅದನ್ನು ಪ್ರಸಾರ ಮಾಡಿದ ನನ್ನ ವಿರುದ್ಧವೇ ಎಫ್ಐಆರ್ ದಾಖಲಿಸಲಾಗಿದೆ. ಇದು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿದೆ ಎಂದು ಮಂಜು ಆರೋಪಿಸಿದ್ದಾರೆ.
ಇನ್ಸ್ಪೆಕ್ಟರ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಮರ್ಥಿಸಿಕೊಂಡಿದ್ದರೆ, ಆ ಹೇಳಿಕೆಯನ್ನು ಪ್ರಸಾರ ಮಾಡಿದ ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಏಕೆ ಎಂದು ಮಂಜು ಪ್ರಶ್ನಿಸಿದ್ದಾರೆ.
“ಇನ್ಸ್ಪೆಕ್ಟರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತಿದ್ದರೆ, ಅದನ್ನು ಪ್ರಸಾರ ಮಾಡಿದ ನನ್ನ ಮೇಲೆ ಎಫ್ಐಆರ್ ಯಾಕೆ? ಸರ್ಕಾರ ಕೂಡಲೇ ನನ್ನ ಮೇಲಿನ ಎಫ್ಐಆರ್ ರದ್ದುಪಡಿಸಿ ನ್ಯಾಯ ಒದಗಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಟಿ. ನರಸೀಪುರದಲ್ಲಿ ನಡೆದ ಘಟನೆಗೆ ಇನ್ಸ್ಪೆಕ್ಟರ್ ಧನಂಜಯ್ ಅವರ ನಡೆ-ನುಡಿಗಳೇ ಕಾರಣ ಎಂದು ಮಂಜು ಆರೋಪಿಸಿದ್ದು, ಈ ವಿಚಾರದಲ್ಲಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Kshetra Samachara
17/09/2026 02:39 pm
LOADING...