ಮೂಡಿಗೆರೆ : ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪ ಬೆಳಗಿನ ಜಾವ ಪುಂಡರ ಗುಂಪೊಂದು ಲಾರಿಯ ಮೇಲೆ ಮನಸೋಇಚ್ಛೆ ಕಲ್ಲು ತೂರಾಟ ನಡೆಸಿ ಭೀತಿ ಹುಟ್ಟಿಸಿದೆ.
ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿಯನ್ನು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಯ ಸುಮಾರಿಗೆ ನಾಲ್ವರು ಯುವಕರು ಕೈ ಮಾಡಿ ನಿಲ್ಲಿಸಲು ಯತ್ನಿಸಿದ್ದಾರೆ. ಅಪರಿಚಿತ ಸ್ಥಳದಲ್ಲಿ ಲಾರಿ ನಿಲ್ಲಿಸದೆ ಚಾಲಕ ಮುಂದೆ ಸಾಗಿದ್ದೇ ತಡ, ರೊಚ್ಚಿಗೆದ್ದ ಯುವಕರು ಲಾರಿಯ ಮೇಲೆ ಕಲ್ಲು ತೂರಿ ಪುಂಡಾಟಿಕೆ ಮೆರೆದಿದ್ದಾರೆ. ಏಕಾಏಕಿ ನಡೆದ ಈ ದಾಳಿಯಿಂದ ಮಂಗಳೂರು ಮೂಲದ ಲಾರಿ ಚಾಲಕ ಹಾಗೂ ಸ್ಥಳೀಯ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಈ ಕೃತ್ಯ ಎಸಗಿದ ಯುವಕರು ಗಾಂಜಾ ಅಮಲಿನಲ್ಲಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದ್ದು, ಅಮಲಿನಲ್ಲಿಯೇ ಈ ಪುಂಡಾಟಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಬಣಕಲ್ ಠಾಣೆ ಪೊಲೀಸರು ನಾಲ್ವರು ಯುವಕರನ್ನು ವಶಕ್ಕೆ ಪಡೆದಿದ್ದು, ಗಾಂಜಾ ಸೇವನೆಯ ದೃಢೀಕರಣಕ್ಕಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಾಟಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾತ್ರಿ ಗಸ್ತು ಚುರುಕುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
18/09/2026 03:38 pm
LOADING...