ಚಿಕ್ಕಮಗಳೂರು : ಜಿಲ್ಲಾ ಡಿಸಿಸಿ ಕೇಂದ್ರ ಬ್ಯಾಂಕ್ ಆರಂಭಿಕ ದಿನಗಳಲ್ಲಿ ಕೇವಲ ₹1,430 ಠೇವಣಿಯೊಂದಿಗೆ ಆರಂಭಗೊಂಡಿದ್ದ ಸಹಕಾರಿ ಸಂಸ್ಥೆಯೊಂದು ಇಂದು ಹೆಮ್ಮರವಾಗಿ ಬೆಳೆದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ₹6.87 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸಿ.ಟಿ. ರವಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ನ ಪ್ರಗತಿ ವಿವರ ಹಂಚಿಕೊಂಡ ಅವರು, ಬ್ಯಾಂಕ್ ಸದ್ಯ 28ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, 129 ಪ್ರಾಥಮಿಕ ಸಹಕಾರ ಸಂಘಗಳು ಹಾಗೂ 267 ಇತರ ಸಹಕಾರ ಸಂಘಗಳು ಸೇರಿದಂತೆ ಒಟ್ಟು 396 ಸದಸ್ಯ ಸಂಘಗಳ ಬಲವಾದ ಜಾಲವನ್ನು ಹೊಂದಿದೆ ಎಂದರು. ಈ ಸಂಘಗಳ ಮೂಲಕ ಜಿಲ್ಲೆಯ ರೈತರಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲಾಗುತ್ತಿದೆ. 2025–26ನೇ ಸಾಲಿನಲ್ಲಿ ಶೇ. 98.5ರಷ್ಟು ಸಾಲ ವಸೂಲಾತಿ ಸಾಧಿಸಲಾಗಿದ್ದು, ₹6.87 ಕೋಟಿ ನಿವ್ವಳ ಲಾಭ ದಾಖಲಾಗಿದೆ.
2014ರಿಂದಲೂ ಬ್ಯಾಂಕ್ ಸತತ 12 ವರ್ಷಗಳಿಂದ ನಿರಂತರವಾಗಿ ಲಾಭದ ಹಾದಿಯಲ್ಲಿದೆ. 2013ರಲ್ಲಿ ಕೃಷಿ ಸಾಲ ಮರುಹೊಂದಾಣಿಕೆ ಕಾರಣದಿಂದ ಒಂದು ವರ್ಷ ನಷ್ಟ ಅನುಭವಿಸಿದ್ದು ಬಿಟ್ಟರೆ, 2009ರಿಂದ ಇಂದಿನವರೆಗೂ ಸಂಸ್ಥೆ ಲಾಭದಲ್ಲೇ ಮುನ್ನಡೆಯುತ್ತಿದೆ. ರಾಜ್ಯದಲ್ಲಿರುವ ಒಟ್ಟು 21 ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ಗಳ ಪೈಕಿ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಸಾಧನೆಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ (113 ಶಾಖೆಗಳು), ಎರಡನೇ ಸ್ಥಾನದಲ್ಲಿ ಬೆಳಗಾವಿ (100 ಶಾಖೆಗಳು) ಇದ್ದು, ನಂತರದ ಸ್ಥಾನಗಳಲ್ಲಿ ವಿಜಯಪುರ, ಉತ್ತರ ಕನ್ನಡ, ಬಾಗಲಕೋಟೆ ಹಾಗೂ ಕೊಡಗು ಬ್ಯಾಂಕ್ಗಳಿದ್ದು, 7ನೇ ಸ್ಥಾನದಲ್ಲಿ ಕಾಫಿನಾಡಿನ ಡಿಸಿಸಿ ಬ್ಯಾಂಕ್ ಸ್ಥಾನ ಭದ್ರಪಡಿಸಿಕೊಂಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
PublicNext
18/09/2026 07:58 pm
LOADING...