ಎನ್.ಆರ್. ಪುರ : ಸೋಮಯ್ಯಾ ಗಣಾಚಾರಿಗೆ ಎಂಎಲ್ಸಿ ಸ್ಥಾನ ನೀಡಲು ಸಿಎಂಗೆ 33 ಮಠಾಧೀಶರ ಒತ್ತಾಯ : ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಐತಿಹಾಸಿಕ ಬಾಳೆಹೊನ್ನೂರು ರಂಭಾಪುರಿ ಮಠದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಉತ್ತರ ಕರ್ನಾಟಕದ ಮುಖಂಡ ಸೋಮಯ್ಯಾ ಗಣಾಚಾರಿ ಅವರಿಗೆ ವಿಧಾನ ಪರಿಷತ್ (ಎಂಎಲ್ಸಿ) ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ 33 ಮಠಾಧೀಶರ ನಿಯೋಗ ಮನವಿ ಸಲ್ಲಿಸಿದೆ.
ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಮಲೆನಾಡಿನ ರೈತರ ಅಹವಾಲು ಆಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಳೆಹೊನ್ನೂರು ಪೀಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಸಮಾವೇಶಗೊಂಡಿದ್ದ 33 ಮಠಾಧೀಶರ ಸಮ್ಮುಖದಲ್ಲಿ ಸರ್ಕಾರಕ್ಕೆ ಈ ಮನವಿ ಸಲ್ಲಿಸಲಾಯಿತು. ವಿಜಯಪುರ ಸಂಸ್ಥಾನ ಹಿರೇಮಠದ ಡಾ. ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಪ್ರಮುಖ ಶ್ರೀಗಳು ಈ ನಿಯೋಗದಲ್ಲಿದ್ದು, ಸೋಮಯ್ಯಾ ಗಣಾಚಾರಿ ಅವರ ಪರವಾಗಿ ಧ್ವನಿ ಎತ್ತಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯವರಾದ ಸೋಮಯ್ಯಾ ಗಣಾಚಾರಿ ಅವರು ಆ ಭಾಗದ ಕಾಂಗ್ರೆಸ್ ಮುಖಂಡರಾಗಿದ್ದು, ವೀರಶೈವ ಲಿಂಗಾಯತ ಸಮುದಾಯದಲ್ಲಿ ನೆಲೆಯನ್ನು ಹೊಂದಿದ್ದಾರೆ. ಪಕ್ಷ ಸಂಘಟನೆ ಹಾಗೂ ಸಮುದಾಯದ ಸೇವೆಗೆ ಮುಂಚೂಣಿಯಲ್ಲಿರುವ ಅವರ ನಿಷ್ಠೆ ಹಾಗೂ ಜನಪರ ಕಾರ್ಯಗಳನ್ನು ಗುರುತಿಸಿ ಮೇಲ್ಮನೆಗೆ ಆಯ್ಕೆ ಮಾಡುವ ಮೂಲಕ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಮಠಾಧೀಶರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
Kshetra Samachara
20/09/2026 10:52 am
LOADING...