ಚಾಮರಾಜನಗರ : ಜಿಲ್ಲೆಯಲ್ಲಿ ಹುಲಿ ದಾಳಿಯ ಭೀತಿ ಮತ್ತೆ ತೀವ್ರಗೊಂಡಿದ್ದು, ತಾಲೂಕಿನ ಕುಮಚಹಳ್ಳಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಎರಡು ಹಸುಗಳನ್ನು ಹುಲಿ ಬೇಟೆಯಾಡಿ ಕೊಂದಿದೆ. ಇತ್ತೀಚೆಗಷ್ಟೇ ಬಡಗಲಪುರದಲ್ಲಿ ರೈತನನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಯೇ ಈ ಹಸುಗಳ ಮೇಲೆಯೂ ದಾಳಿ ನಡೆಸಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಬಡಗಲಪುರ, ಕುಮಚಹಳ್ಳಿ ಹಾಗೂ ತಮ್ಮಡಹಳ್ಳಿ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ವ್ಯಾಘ್ರನ ಭಯದಿಂದಾಗಿ ಜಮೀನಿಗೆ ತೆರಳಿ ನೀರು ಹಾಯಿಸಲು ರೈತರು ಹಿಂಜರಿಯುತ್ತಿದ್ದು, ದುಪ್ಪಟ್ಟು ಕೂಲಿ ನೀಡುತ್ತೇವೆ ಎಂದರೂ ಆಳುಗಳು ಜಮೀನಿನತ್ತ ಹೆಜ್ಜೆ ಇಡಲು ನಿರಾಕರಿಸುತ್ತಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಸೆರೆಹಿಡಿಯಲು ಮೃತ ಹಸುವಿನ ದೇಹವನ್ನೇ ಬೋನಿನಲ್ಲಿಟ್ಟು ಕಾಯುತ್ತಿದ್ದರೂ, ಚಾಣಾಕ್ಷ ಹುಲಿ ಬೋನಿಗೆ ಬೀಳದೆ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದೆ.
ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ‘ಸ್ಪೆಷಲ್ ಡ್ರೈವ್’ ನಡೆಸಿ ನರಭಕ್ಷಕ ಹುಲಿಯನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
PublicNext
20/09/2026 03:42 pm
LOADING...