ಮೈಸೂರು: ಜಮೀನು ವಿಚಾರಕ್ಕೆ ಕಿರಿಕ್ ತೆಗೆದ ಕುಟುಂಬವೊಂದು ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲ್ಲೂಕು ಬಿಳಿಕೆರೆ ವ್ಯಾಪ್ತಿಯ ಅನ್ನರಾಯಪುರ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಸ್ವಾಮಿನಾಯಕ ಎಂಬುವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದ ಗೋಪಾಲನಾಯಕ, ಆತನ ಪತ್ನಿ ಮೀನಾಕ್ಷಿ ಹಾಗೂ ಸಂಬಂಧಿಕರಾದ ಚೇತನ್ ಮತ್ತು ಮಂಜು ಎಂಬುವರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಬೆಂಕಿಪುರ ಗ್ರಾಮದ ಸರ್ವೆ ನಂ.69/01 ರ ಎರಡು ಎಕರೆ ಜಮೀನಿನಲ್ಲಿ ಸ್ವಾಮಿ ನಾಯಕ ಎಂಬುವರು ಉಳುಮೆ ಮಾಡುತ್ತಿದ್ದಾಗ ಬಂದ ನಾಲ್ವರು ಕ್ಯಾತೆ ತೆಗೆದಿದ್ದಾರೆ. ಗೋಪಾಲನಾಯಕನ ಮೇಲೆ ಎರಗಿದಾಗ ಪತ್ನಿ ರೋಜಾ ನೆರವಿಗೆ ಬಂದಿದ್ದಾರೆ. ರೋಜಾ ಜೊತೆ ಮಂಜು ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದೇ ವೇಳೆ ಸ್ವಾಮಿನಾಯಕನ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಸ್ವಾಮಿನಾಯಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರ ವಿರುದ್ದ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
29/06/2025 02:44 pm