ಪುತ್ತೂರು: ಬಿಜೆಪಿ ಮುಖಂಡನ ಪುತ್ರನಿಂದ ವಿದ್ಯಾರ್ಥಿನಿ ಗರ್ಭವತಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಷ್ಣ ಜೆ. ರಾವ್ ತಾನು ಆಕೆಯನ್ನು ಮದುವೆಯಾಗುವುದಿಲ್ಲ ಎಂದು ನಾಪತ್ತೆಯಾಗಿದ್ದಾನೆ. ಆದ್ದರಿಂದ ಪುತ್ರಿಗೆ ನ್ಯಾಯ ಕೊಡುವಂತೆ ಸಂತ್ರಸ್ತೆಯ ತಾಯಿ ಮಾಧ್ಯಮದ ಮುಂದೆ ಬಂದಿದ್ದಾರೆ.
ಪುತ್ರಿ ಮತ್ತು ಆರೋಪಿ ಕೃಷ್ಣ ಜೆ.ರಾವ್ ಪ್ರೌಢಶಾಲೆಯಲ್ಲಿ ಇರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಈ ಪ್ರೀತಿ ಮುಂದುವರಿದು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಆದರೆ, ಪುತ್ರಿ ಗರ್ಭಿಣಿಯಾಗಿ ಏಳು ತಿಂಗಳ ಬಳಿಕ ನಮಗೆ ವಿಚಾರ ತಿಳಿದಿದೆ. ಈ ಬಗ್ಗೆ ಆರೋಪಿತನ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರ ಬಳಿ ಪ್ರಶ್ನಿಸಿದ್ದೇವೆ. ಆಗ ಅವರು ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿದ್ದರು. ಆದರೆ ಆರೋಪಿ ಕೃಷ್ಣ ಜೆ.ರಾವ್ ಪುತ್ರಿಯನ್ನು ಮದುವೆಯಾಗೋದಿಲ್ಲ ಎಂದು ತಿಳಿಸಿದ್ದಾನೆ. ಒತ್ತಾಯ ಮಾಡಿದಾಗ ತಾನು ಆತ್ಮಹತ್ಯೆ ಮಾಡುವುದಾಗಿಯೂ ಹೇಳುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಇದರಿಂದ ಬೇಸತ್ತು ನಾವು ಆತನ ವಿರುದ್ಧ ದೂರು ನೀಡಲು ಪುತ್ತೂರು ಮಹಿಳಾ ಠಾಣೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ಕೂಡಾ ಠಾಣೆಗೆ ಬಂದಿದ್ದರು. ಮದುವೆ ಮಾಡಿಕೊಡುವುದಾಗಿ ಠಾಣೆಯಲ್ಲಿ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ
ಜೂನ್ 23ಕ್ಕೆ ಆರೋಪಿಗೆ 21 ವರ್ಷ ತುಂಬುತ್ತದೆ. ಆ ಬಳಿಕ ರಿಜಿಸ್ಟ್ರಾರ್ ಮದುವೆ ಮಾಡುವುದಾಗಿ ಹೇಳಿದ್ದರು. ಆದರೆ, ಆ ದಿನದಿಂದ ಆರೋಪಿ ನಾಪತ್ತೆಯಾಗಿದ್ದಾನೆ. ಆತನ ತಾಯಿ ನಿಮ್ಮ ಪುತ್ರಿಯನ್ನು ಆತನಿಗೆ ಮದುವೆ ಮಾಡುವ ಸಾಧ್ಯತೆಯೇ ಇಲ್ಲ ಎಂದು ಅಬಾರ್ಷನ್ ಮಾಡುವಂತೆ ಹೇಳಿದ್ದಾರೆ. ಆದರೆ ಏಳುವರೆ ತಿಂಗಳು ಆದ್ದರಿಂದ ಅಬಾರ್ಷನ್ ಮಾಡಲು ಆಗಿಲ್ಲ. ಇದೀಗ ಆಕೆಗೆ ಹೆರಿಗೆಯಾಗಿದ್ದು, ನಾವು ಮಗುವಿನ ಡಿ.ಎನ್.ಎ. ಪರೀಕ್ಷೆ ಮಾಡಲು ಸಿದ್ಧರಿದ್ದೇವೆ.
ಆರೋಪಿ ನಾಪತ್ತೆಯಾಗಿ 5 ದಿನ ಕಳೆದರೂ ಪೊಲೀಸರು ಆತನನ್ನು ಬಂಧಿಸಿಲ್ಲ. ಹಿಂದೂ ಪರ ಸಂಘಟನೆಗಳ ಮೊರೆ ಹೋಗಿದ್ದೇವೆ. ಯಾರೂ ನಮಗೆ ಸರಿಯಾಗಿ ಸ್ಪಂದಿಸಿಲ್ಲ. ಎಸ್ಪಿಯನ್ನೂ ಭೇಟಿ ಮಾಡಿ ನಮಗಾದ ಅನ್ಯಾಯದ ಬಗ್ಗೆ ತಿಳಿಸಿದ್ದೇವೆ. ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಮ್ಮ ಪುತ್ರಿಗೆ ನ್ಯಾಯ ಕೊಡಿಸಬೇಕು ಎಂದು ಮಾಧ್ಯಮದ ಮುಂದೆ ಸಂತ್ರಸ್ತೆಯ ತಾಯಿ ಅಳಲು ತೋಡಿಕೊಂಡಿದ್ದಾರೆ.
PublicNext
30/06/2025 10:21 pm