ಆಗ್ರಾ: ಆದುನಿಕ ಸಮಾಜದಲ್ಲಿ ಮಾನವೀಯತೆ ಎನ್ನುವುದು ಕಾಲ ಕಳೆದಂತೆ ಸತ್ತುಹೋಗಿದೆಯೇನೋ ಎನ್ನವಂತೆ ಸಾಕಷ್ಟು ದೃಶ್ಯಗಳು ಕ್ರಮೇಣ ಹೆಚ್ಚಾಗುತ್ತಿವೆ. ಅದರಲ್ಲೂ ಹಿರಿಯರನ್ನು ನಿರ್ಲಕ್ಷ್ಯ ಮಾಡುವ ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೀಗ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಕಾರಿನಲ್ಲಿ ವೃದ್ಧನೊಬ್ಬರು ಕೈ-ಕಾಲು ಕಟ್ಟಿ, ವೃದ್ಧರನ್ನು ಕಟ್ಟಿಹಾಕಿ ಕ್ರೂರವಾಗಿ ಹಿಂಸೆ ನೀಡಿದ ಘಟಬೆ ಬೆಳಕಿಗೆ ಬಂದಿದೆ.
ಈ ಘಟನೆ ಆಗ್ರಾದ ತಾಜ್ ಮಹನ್ ಪಶ್ಚಿಮ ದ್ವಾರದ ಬಳಿ ನಡೆದಿದ್ದು, ಕಾರು ಲಾಕ್ ಮಾಡಿ ಬಟ್ಟೆಗಳಿಂದ ವೃದ್ಧನನ್ನು ಕಟ್ಟಿಹಾಕಲಾಗಿತ್ತು. ತೀವ್ರ ಬಿಸಿಲು ಮತ್ತು ನೀರಿಲ್ಲದ ಸ್ಥಿತಿಯಲ್ಲಿ, ಅವರು ಕಷ್ಠದಿಂದ ನರಳುತ್ತಿದ್ದರು. ಕಾರಿನೊಳಗಿನ ವೃದ್ದನನ್ನ ಗಮನಿಸಿದ ಸಿಬ್ಬಂದಿ ತಕ್ಷಣವೇ ಕಿಟಕಿ ಒಡೆದು ವೃದ್ಧರನ್ನು ರಕ್ಷಿಸಿದ್ದಾರೆ. ನೀರು ನೀಡಿದರೂ ಅವರು ಮಾತನಾಡಲಾಗದಷ್ಟು ನಿರುಜ್ಜೀವ ಸ್ಥಿತಿಯಲ್ಲಿದ್ದರು. ತಕ್ಷಣ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿ ಹಾಗೂ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಯಾಗಿರುವ ಮೊಹಮ್ಮದ್ ಅಸ್ಲಾಂ, ಘಟನೆಯ ಕುರಿತು ಮಾತನಾಡಿ, ಆ ವ್ಯಕ್ತಿಯನ್ನು ಕಟ್ಟಿಹಾಕಲಾಗಿತ್ತು. ಅವರಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಇಡೀ ದೃಶ್ಯವು ತುಂಬಾ ಚಿಂತಾಜನಕವಾಗಿತ್ತು ಎಂದು ತಿಳಿಸಿದ್ದಾರೆ. ಕಾರು ಮಹಾರಾಷ್ಟ್ರ ನಂಬರ್ ಪ್ಲೇಟ್ ಹೊಂದಿದ್ದು, ‘ಮಹಾರಾಷ್ಟ್ರ ಸರ್ಕಾರ’ ಸ್ಟಿಕ್ಕರ್ ಅಂಟಿಸಲಾಗಿತ್ತು. ತಾಜ್ ಮಹಲ್ ನೋಡಲು ಕುಟುಂಬ ತೆರಳಿ, ವೃದ್ಧರನ್ನು ಕಾರಿನಲ್ಲಿ ಬಿಟ್ಟುಹೋದ ಶಂಕೆ ವ್ಯಕ್ತವಾಗಿದೆ.
ಇನ್ಸ್ಪೆಕ್ಟರ್ ಕುನ್ವರ್ ಸಿಂಗ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿ, ಸಿಸಿಟಿವಿ ದೃಶ್ಯ ಪರಿಶೀಲನೆ ಮತ್ತು ತನಿಖೆ ಆರಂಭಿಸಿದ್ದಾರೆ. ಕಾರಿನ ಮಾಲೀಕರು ಮತ್ತು ಸಂಬಂಧಿತವರ ಪತ್ತೆ ಕಾರ್ಯ ಮುನ್ನಡೆಯುತ್ತಿದೆ.
ಈ ದಾರುಣ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೃದ್ಧ ವ್ಯಕ್ತಿಯನ್ನು ಈ ರೀತಿ ಬಿಟ್ಟು ಹೋಗಿರುವುದು ಮಾನವೀಯತೆಯ ಅಪಮಾನ ಎಂದು ತೀವ್ರವಾಗಿ ಟೀಕಿಸಿದ್ದಾರೆ. "ವೃದ್ಧರ ಜೊತೆಗೆ ಕ್ರೂರವಾಗಿ ವರ್ತಿಸುವ ಹಕ್ಕು ಯಾರಿಗೆ ಇದೆ?" ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.
PublicNext
18/07/2025 05:30 pm