ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೃಹ ಸಚಿವರಿಂದ ತುಮಕೂರು ದಸರಾ-2025 ಲಾಂಛನ ಬಿಡುಗಡೆ

ತುಮಕೂರು : ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಸೋಮವಾರ ತುಮಕೂರು ದಸರಾ-2025 ಲಾಂಛನವನ್ನು ಬಿಡುಗಡೆ ಮಾಡಿದರು.

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು ಕಳೆದ ವರ್ಷ ವಿನ್ಯಾಸಗೊಳಿಸಿದ್ದ ದಸರಾ ಲಾಂಛನವನ್ನೇ ದಸರಾ ಉತ್ಸವದ ಶಾಶ್ವತ ಲಾಂಛನವನ್ನಾಗಿಸಲು ನಿರ್ಣಯಿಸಲಾಗಿದೆ. ಮೈಸೂರು ದಸರಾ ಉತ್ಸವದ ಲಾಂಛನವು ಮಹಾರಾಜರ ಕಾಲದಿಂದಲೂ ಬಳಕೆಯಲ್ಲಿರುವಂತೆ ಜಿಲ್ಲೆಯಲ್ಲಿಯೂ ಕಳೆದ ವರ್ಷದ ಲಾಂಛನವನ್ನೇ ಅಂತಿಮಗೊಳಿಸಿ ಮುಂದಿನ ದಿನಗಳಲ್ಲಿ ಶಾಶ್ವತ ದಸರಾ ಲಾಂಛನವಾಗಿ ಬಳಕೆಯಾಗಲಿದೆ ಎಂದು ತಿಳಿಸಿದರು.

ಕಳೆದ ವರ್ಷ 2025 ರ ದಸರಾ ಆಚರಣೆ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತಾದರೂ ಉತ್ಸವವು ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಜಿಲ್ಲೆಯ ಜನತೆಗೆ ನಾಡದೇವಿಯ ಮೇಲಿರುವ ಭಕ್ತಿ, ಪ್ರೀತಿಯೇ ದಸರಾ ಉತ್ಸವದ ಯಶಸ್ಸಿಗೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು.

ಮೈಸೂರು ದಸರಾ ಉತ್ಸವಕ್ಕೆ ತನ್ನದೇ ಆದ ಐತಿಹ್ಯವಿದೆ. ದೇಶ-ವಿದೇಶಗಳಿಂದ ಗಣ್ಯರನ್ನು ಉತ್ಸವಕ್ಕೆ ಆಹ್ವಾನಿಸಿ ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುವ ಮೈಸೂರು ಮಹಾರಾಜರ ಆಶಯವೇ ಮೈಸೂರು ದಸರಾ ಜಗತ್ಪ್ರಸಿದ್ಧವಾಗಲು ಕಾರಣವಾಯಿತು ಎಂದು ಮೈಸೂರು ದಸರಾ ಬೆಳೆದು ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು.

ಮೈಸೂರು ದಸರಾ ಮಾದರಿಯಲ್ಲಿಯೇ ತುಮಕೂರಿನಲ್ಲಿಯೂ ಹಲವಾರು ವಿನೂತನ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾಕರ್ಷಕಗೊಳಿಸಲು ಈಗಾಗಲೇ 21 ಸಮಿತಿಗಳನ್ನು ರಚಿಸಿ ಜಿಲ್ಲಾಡಳಿತ ಕಾರ್ಯತತ್ಪರವಾಗಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ 11 ದಿನಗಳ ಕಾಲ ನಡೆಯಲಿರುವ ಜಿಲ್ಲಾ ದಸರಾ ಉತ್ಸವಕ್ಕೆ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 22 ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು. ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರತೀ ದಿನ ವಿವಿಧ ಅಲಂಕಾರದಲ್ಲಿ ಪೂಜಿಸಿ ಶಾಸ್ತ್ರೋಕ್ತವಾಗಿ ಹೋಮ-ಹವನಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಈ ಜಿಲ್ಲಾ ದಸರಾ ಉತ್ಸವವನ್ನು ಯಾವುದೇ ಸರ್ಕಾರ, ಯಾವುದೇ ಆಡಳಿತ ವರ್ಗವಿರಲಿ ಪ್ರತೀ ವರ್ಷ ಆಚರಣೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಉತ್ಸವವನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕೇ ಹೊರತು ಒಡಕು-ಕೆಡಕುಗಳಿಗೆ ಅವಕಾಶ ನೀಡಬಾರದು ಎಂದು ಮಾರ್ಮಿಕವಾಗಿ ನುಡಿದರಲ್ಲದೆ, ಯಾವುದೇ ಜಾತಿ, ಧರ್ಮ, ಪಂಥ, ಪಕ್ಷವೆಂದು ಬೇಧ-ಭಾವವಿಲ್ಲದೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಳೆದ ಬಾರಿಯಂತೆ ಈ ಬಾರಿಯೂ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಳೆದ ವರ್ಷದ ಜಿಲ್ಲಾ ದಸರಾ ಉತ್ಸವದ ಯಶಸ್ಸು ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ತುಮಕೂರಿನ ಕೀರ್ತಿಯನ್ನು ಹೆಚ್ಚಿಸುವಂತೆ ಮಾಡಿದೆ. ಈ ವರ್ಷದ ಉತ್ಸವದಲ್ಲಿ ಬೃಹತ್ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ವಸ್ತು ಪ್ರದರ್ಶನದಲ್ಲಿ ಹೆಚ್‌ಎಎಲ್, ಇಸ್ರೋ, ತೋಟಗಾರಿಕೆ ವಿಶ್ವ ವಿದ್ಯಾನಿಲಯ, ಸೇರಿದಂತೆ ವಿವಿಧ ಇಲಾಖೆಗಳು ಪಾಲ್ಗೊಳ್ಳಲಿವೆ. ಇದರ ಜೊತೆಗೆ ಏರ್ಪಡಿಸಲಾಗುವ ಫಲ-ಪುಷ್ಪ ಪ್ರದರ್ಶನದಲ್ಲಿ ತುಮಕೂರಿನ ಹೆಸರಾಂತ ತಿಪಟೂರು ತಾಲ್ಲೂಕಿನ ಅರಳುಗುಪ್ಪೆ ದೇವಾಲಯದ ಮಾದರಿಯನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಉತ್ಸವದಲ್ಲಿ ವಿಶೇಷವಾಗಿ ಈ ಬಾರಿ ಹೆಲಿಕಾಪ್ಟರ್ ಪ್ರವಾಸ(ಹೆಲಿ ರೈಡ್), ಹಾಟ್ ಏರ್ ಬಲೂನ್, ಕಾಲೇಜು ವಿದ್ಯಾರ್ಥಿಗಳಿಂದ ಪಂಜಿನ ಕವಾಯತು, ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ, ದೀಪಾಲಂಕಾರ, ಡ್ರೋನ್ ಶೋ, ಬಾಣ-ಬಿರುಸುಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರಲ್ಲದೆ, ಮಹಿಳಾ ಮತ್ತು ಮಕ್ಕಳ ದಸರಾ, ಯುವ ದಸರಾ, ಕವಿಗೋಷ್ಠಿ ಹಾಗೂ ದಸರಾ ಕ್ರೀಡೆಯಲ್ಲಿ ಟೆನ್ನಿಸ್, ಶೂಟಿಂಗ್, ಕಬಡ್ಡಿ, ವಾಲಿಬಾಲ್, ಕುಸ್ತಿ ಪಂದ್ಯಗಳು ನಡೆಯಲಿವೆ. ಕಡೆಯ ದಿನ ಅಕ್ಟೋಬರ್ 2 ರಂದು ಸುತ್ತ-ಮುತ್ತಲಿನ ಗ್ರಾಮ ದೇವತೆಗಳ ಮೆರವಣಿಗೆ, ಜಂಬೂ ಸವಾರಿ ಜರುಗಲಿದೆ ಎಂದು ತಿಳಿಸಿದರು.

ಈ ಬಾರಿ ಮೂಡುಬಿದರೆಯ ಆಳ್ವಾಸ್ ಸಾಂಸ್ಕೃತಿಕ ತಂಡ, ಅನನ್ಯ ಭಟ್, ಅನುರಾಧ ವಿಕ್ರಾಂತ್, ಅರ್ಜುನ್ ಜನ್ಯ ತಂಡದಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮದ ಜೊತೆಗೆ ಕನ್ನಡದ ಸುಪ್ರಸಿದ್ಧ ಚಲನಚಿತ್ರ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟಿ ರಮ್ಯಾ ಆಗಮಿಸಿ ನಮ್ಮನ್ನೆಲ್ಲಾ ರಂಜಿಸಲಿದ್ದಾರೆ ಎಂದು ತಿಳಿಸಿದರು.

ತುಮಕೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲೆಯ 330 ಗ್ರಾಮ ಪಂಚಾಯತಿಗಳ ಮನೆ-ಮನೆಗೂ ಭೇಟಿ ನೀಡಿ ಜನತೆಗೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಡಾ|| ಹೆಚ್.ಡಿ. ರಂಗನಾಥ್, ಹಾಗೂ ಷಡಕ್ಷರಿ ಮಾತನಾಡಿ ದಸರಾ ಉತ್ಸವ-2025ರ ಯಶಸ್ಸಿಗೆ ಶುಭ ಕೋರಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ದಸರಾ ಸಮಿತಿ ಹಾಗೂ ಉಪ ಸಮಿತಿಗಳ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

09/09/2025 07:51 am

Cinque Terre

580

Cinque Terre

0

ಸಂಬಂಧಿತ ಸುದ್ದಿ