ಮಂಗಳೂರು: ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರೂ, ವೈದ್ಯೆಯಾಗಿ ಸಾಧನೆ ಮಾಡಿದ ಪುತ್ತೂರಿನ ಯುವತಿಯೋರ್ವರು ಇದೀಗ ಮಿಸೆಸ್ ಇಂಡಿಯಾ-2025 ಕಿರೀಟ ಮುಡಿಗೇರಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಸದ್ಯ ಮುಂಬೈ ನಿವಾಸಿಯಾಗಿರುವ ಡಾ. ರಶ್ಮಾ ಎಂ.ಶೆಟ್ಟಿಯವರು ಜೈಪುರದ ಜೈಬಾಗ್ ಪ್ಯಾಲೇಸ್ನಲ್ಲಿ ನಡೆದ ಮಿಸೆಸ್ ಇಂಡಿಯಾ – ಸೀಸನ್ 15ರ ಕಿರೀಟ ಮುಡಿಗೇರಿಸಿಕೊಂಡವರು. ಇವರು ಮುಲುಂಡ್ನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯೆಯಾಗಿದ್ದಾರೆ.
ದೀಪಾಲಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 40 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.
ನಾಲ್ಕು ದಿನಗಳ ಸ್ಪರ್ಧೆಯಲ್ಲಿ ಪ್ರತಿಭಾ ಸುತ್ತು, ಪ್ರೇರಣಾದಾಯಕ ಜೀವನ ಕಥೆ, ವೈಯಕ್ತಿಕ ಸಂದರ್ಶನ, ರ್ಯಾಂಪ್ ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಸುತ್ತು ಹಾಗೂ ಈವಿನಿಂಗ್ ಗೌನ್ ಸುತ್ತುಗಳ ಸ್ಪರ್ಧೆ ನಡೆದಿತ್ತು. ಅಂತಿಮವಾಗಿ ರಶ್ಮಾ ಶೆಟ್ಟಿಯವರು ಮಿಸೆಸ್ ಇಂಡಿಯಾ ಕಿರೀಟ ಮುಡಿಗೇರಿಸಿ ಗೆದ್ದು ಬೀಗಿದ್ದಾರೆ.
ಡಾ.ರಶ್ಮಾ ಎಂ.ಶೆಟ್ಟಿಯವರು ಮಿಸೆಸ್ ಇಂಡಿಯಾ ಕರ್ನಾಟಕ 2024ರ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಆಗಿದ್ದರು. ಅಲ್ಲದೆ ಬಂಟರ ಸಂಘ ಮುಂಬೈ ಯುವ ವಿಭಾಗ ಆಯೋಜಿಸಿದ ಆಕಾಂಕ್ಷ ಮಿಸೆಸ್ ಬಂಟ್ಸ್ 2023ರ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿರುವ ಇವರು ಶಾಲಾ ದಿನಗಳಲ್ಲೇ ಡಿಸ್ಕಸ್ ಥ್ರೋ, ಥ್ರೋ ಬಾಲ್ ಕ್ರೀಡೆಗಳಲ್ಲಿ ಸಾಧನೆ ಮಾಡಿದರು. ಈಗಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಂತೆ.
ಮುಂಬೈ ನಿವಾಸಿ ಮೋಹಿತ್ ಶೆಟ್ಟಿಯವರ ಪತ್ನಿಯಾಗಿರುವ ಇವರಿಗೆ 7ವರ್ಷದ ಪುತ್ರಿ ಇದ್ದಾಳೆ. ತಮ್ಮ ಪತಿ ಹಾಗೂ ಅತ್ತೆ-ಮಾವನ ಸಹಕಾರದೊಂದಿಗೆ ಈ ಸಾಧನೆ ಸಾಧ್ಯವಾಯಿತು ಎಂದು ರಶ್ಮಾ ಶೆಟ್ಟಿ ಹೇಳುತ್ತಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
PublicNext
19/01/2026 04:26 pm