ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಅಟ್ಟಹಾಸ ಮೆರೆದಿದ್ದ ರಾಜೀವ್ ಗೌಡನನ್ನು ಬಂಧಿಸಿರುವ ಪೊಲೀಸರು ಪೊಲೀಸ್ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಿ ಬಳಿಕ ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಪೌರಾಯುಕ್ತೆಗೆ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾದಾಗಿನಿಂದ ಊರೂರು ಅಲೆಯುತ್ತಾ ಪೊಲೀಸರಿಗೆ ಸವಾಲಾಗಿದ್ದ ರಾಜೀವ್ ಗೌಡನನ್ನು ಪೊಲೀಸರು ಕೇರಳ ಗಡಿಯ ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೋಚಕ ಪೊಲೀಸ್ ಕಾರ್ಯಾಚರಣೆ
ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಸುಳಿವು ಪೊಲೀಸರಿಗೆ ಲಭಿಸಿತ್ತು. ಮಂಗಳೂರಿನಲ್ಲಿದ್ದ ಆರೋಪಿ ಅಲ್ಲಿಂದ ಬೇರೆ ರಾಜ್ಯಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ. ಈ ವೇಳೆ ಆತನಿಗೆ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಆಶ್ರಯ ನೀಡಿರುವುದು ಖಚಿತವಾಗಿತ್ತು. ಆದರೆ, ಮೈಕಲ್ ಅವರ ಸಂಪರ್ಕ ಸಂಖ್ಯೆ ಪೊಲೀಸರ ಬಳಿ ಇರಲಿಲ್ಲ.
ನಾಟಕೀಯ ತಂತ್ರದಿಂದ ಆರೋಪಿ ಪತ್ತೆ
ಇಲ್ಲೇ ಪೊಲೀಸರು ನಾಟಕೀಯ ತಂತ್ರವೊಂದನ್ನು ಬಳಸಿದರು. ಮೈಕಲ್ ಪುತ್ರನ ಸಾವಿನ ಹಳೆಯ ಪ್ರಕರಣವನ್ನೇ ಅಸ್ತ್ರವಾಗಿ ಬಳಸಿಕೊಂಡ ಪೊಲೀಸರು, ಮೈಕಲ್ ಸಂಬಂಧಿಕರಿಗೆ "ಚಿಕ್ಕಜಾಲ ಪೊಲೀಸರು" ಎಂಬ ಹೆಸರಿನಲ್ಲಿ ಕರೆ ಮಾಡಿದರು. ಹಳೆ ಕೇಸ್ ವಿಚಾರವಾಗಿ ಮಾತನಾಡಬೇಕು ಎಂದು ವಿಶ್ವಾಸ ಗಳಿಸಿ ಮೈಕಲ್ ಅವರ ಫೋನ್ ನಂಬರ್ ಪಡೆದರು. ಆ ನಂಬರ್ ಟ್ರೇಸ್ ಮಾಡಿದಾಗ ಸ್ಥಳ ಪತ್ತೆಯಾದ ಕೂಡಲೇ, ಪೊಲೀಸರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಮೈಕಲ್ ಹಾಗೂ ರಾಜೀವ್ ಗೌಡ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಯಿತು.
ನ್ಯಾಯಾಂಗ ಬಂಧನದಲ್ಲಿ ಆರೋಪಿಗಳು
ಸದ್ಯ ಪೌರಾಯುಕ್ತೆಗೆ ಬೆದರಿಕೆ ಹಾಕಿದ ರಾಜೀವ್ ಗೌಡನ ಜೊತೆಗೆ, ಆರೋಪಿಗೆ ಆಶ್ರಯ ನೀಡಿದ್ದ ಉದ್ಯಮಿ ಮೈಕಲ್ ಕೂಡ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕರ್ತವ್ಯ ನಿರತ ಅಧಿಕಾರಿಗೆ ಬೆದರಿಕೆ ಹಾಕಿದರೆ ಅಥವಾ ಅಕ್ರಮ ಚಟುವಟಿಕೆಗಳಿಗೆ ಆಶ್ರಯ ನೀಡಿದರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಉತ್ತಮ ನಿದರ್ಶನವಾಗಿದೆ.
PublicNext
27/01/2026 04:17 pm