ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಬಡವರಿಗಾಗಿ ಮೀಸಲಿಟ್ಟಿದ್ದ ಅನ್ನಭಾಗ್ಯ ಯೋಜನೆಯ 4 ಕ್ವಿಂಟಾಲ್ ಅಕ್ಕಿ ಹಾಗೂ 80 ಕ್ವಿಂಟಾಲ್ ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ದಾಸ್ತಾನು ಪತ್ತೆಯಾಗಿ ವಶಪಡಿಸಿಕೊಳ್ಳಲಾಗಿದೆ.
ಗೌರಿಬಿದನೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಧನಲಕ್ಷ್ಮಿ ಕೋ ಜೋಳದ ವ್ಯಾಪಾರಿಗಳು ಎಂಬ ಗೋದಾಮಿನಲ್ಲಿ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು.
ಸಾರ್ವಜನಿಕರ ದೂರಿನ ಮೇರೆಗೆ ಗೌರಿಬಿದನೂರು ಆಹಾರ ಇಲಾಖೆಯ ಶಿರಸ್ತೇದಾರರಾದ ವೈ.ಕೆ. ಪುಷ್ಪಲತಾ ಅವರು ಫೆಬ್ರುವರಿ 1ರ ಸೋಮವಾರ ಸಂಜೆ ದಾಳಿ ನಡೆಸಿದಾಗ ಗೋದಾಮಿಗೆ ಬೀಗ ಹಾಕಲಾಗಿತ್ತು.
ಗೋದಾಮಿನ ಮುಂಭಾಗದಲ್ಲಿ ಅನ್ನಭಾಗ್ಯ ಅಕ್ಕಿ ಮತ್ತು ರಾಗಿ ಬಿದ್ದಿರುವುದನ್ನು ಕಂಡು ಕೂಡಲೇ ಗೋದಾಮಿನ ಮಾಲೀಕರನ್ನು ದೂರವಾಣಿ ಕರೆ ಮಾಡಿ ಸಂಪರ್ಕಿಸಿದಾಗ ಅವರು ಹಾರಿಕೆ ಉತ್ತರವನ್ನು ನೀಡಿ ದಿಕ್ಕುತಪ್ಪಿಸಲು ಪ್ರಯತ್ನಿಸಿದರು,
ಆ ಸಂದರ್ಭದಲ್ಲಿ ತಹಶೀಲ್ದಾರರ ಆದೇಶ ಮತ್ತು ಮಾರ್ಗದರ್ಶನದಂತೆ ಮಾಲೀಕನಿಗೆ ನಿಗದಿತ ಸಮಯವನ್ನು ನೀಡಿ ಒಂದು ವೇಳೆ ಅವರು ಸ್ಥಳಕ್ಕೆಬಂದು ಗೋದಾಮಿನ ಬೀಗ ತೆಗೆದು ಒಳಗೆ ಪರಿಶೀಲಿಸಲು ಸಹಕರಿಸದಿದ್ದಲ್ಲಿ ಗೋದಾಮನ್ನು ಸೀಸ್ ಮಾಡಿ ವಶಪಡಿಸಿಕೊಳ್ಳಲು ಸೂಚಿಸಿದರು.
ದಾಳಿ ನಡೆಸಿದಾಗ ಧನಲಕ್ಷ್ಮಿ ಕೋ ಜೋಳದ ವ್ಯಾಪಾರಿಗಳು ಎಂಬ ಗೋದಾಮಿನಲ್ಲಿ ಆದಿತ್ಯ ಎಂಬ ವ್ಯಕ್ತಿಯು ಅಕ್ರಮವಾಗಿ ದಾಸ್ತಾನು ಇರಿಸಿದ್ದ 4 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಮತ್ತು 80 ಕ್ವಿಂಟಾಲ್ ರಾಗಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆಯ ಶಿರಸ್ತೇದಾರರಾದ ವೈ.ಕೆ. ಪುಷ್ಪಲತಾ ಮಾಹಿತಿ ನೀಡಿದ್ದಾರೆ.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
03/02/2026 05:51 pm
LOADING...