ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೆಲ ನಿರ್ಮಾಪಕರು ಹೀರೋಗಳ ಮನೆಯಲ್ಲಿ ಕಮೋಡ್ ತೊಳೀತಾರೆ ಇನ್ನೂ ಮುಂದೆ ಹೋಗಿ ಕಾಂಡೋಮ್ ಕೂಡ ಸಪ್ಲೈ ಮಾಡ್ತಾರೆ ಅಂತ ಚಂದ್ರಚೂಡ್ ಹೇಳಿಕೆ ನೀಡಿರೋ ವಿಡಿಯೋ ವೈರಲ್ ಬೆನ್ನಲ್ಲೆ ನಿರ್ಮಾಪಕರ ಸಂಘ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಟ-ನಿರ್ದೇಶಕ ಚಂದ್ರಚೂಡ್ ವಿರುದ್ಧ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘವು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. ನಿರ್ಮಾಪಕರ ಬಗ್ಗೆ ಹಗುರವಾಗಿ ಮತ್ತು ಅವಮಾನಕಾರಿಯಾಗಿ ಮಾತನಾಡಿದ ಆರೋಪ ಚಂದ್ರಚೂಡ್ ಮೇಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ತಮ್ಮ ಹೇಳಿಕೆಯಲ್ಲಿ, ನಿರ್ಮಾಪಕರೆಲ್ಲ ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆ. ಚಿನ್ನದ ಕಮೋಡ್ ಕೊಡ್ತಾರೆ ಎಂದು ಚಂದ್ರಚೂಡ್ ಹೇಳಿರೋ ವಿಡಿಯೋ ವೈರಲ್ ಆಗಿತ್ತು. ಈ ಹೇಳಿಕೆಯು ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಅಪಮಾನ ಮಾಡಿದೆ ಎಂದು ಸಂಘವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಚಂದ್ರಚೂಡ್ ಅವರ ಈ ಮಾತುಗಳು ಅಸಭ್ಯ, ಅವಾಚ್ಯ ಹಾಗೂ ಮಾನಹಾನಿಕರ ಪದಬಳಕೆಯಾಗಿದ್ದು, ನಿರ್ಮಾಪಕರ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿವೆ ಎಂದು ನಿರ್ಮಾಪಕರ ಸಂಘ ಆರೋಪಿಸಿದೆ. ನಿರ್ಮಾಪಕರನ್ನು ಡಾ. ರಾಜ್ಕುಮಾರ್ ಅವರು ಅನ್ನದಾತರು ಎಂದು ಗೌರವದಿಂದ ಕರೆದಿದ್ದನ್ನು ಸ್ಮರಿಸಿದ ಸಂಘ, ಚಂದ್ರಚೂಡ್ ಅವರ ಹೇಳಿಕೆಯು ಸಮಾಜದಲ್ಲಿ ದ್ವೇಷವನ್ನು ಉಂಟು ಮಾಡುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಚಂದ್ರಚೂಡ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಎಫ್ಐಆರ್ ದಾಖಲಿಸುವಂತೆ ಸಂಘವು ಹೈಗ್ರೌಂಡ್ಸ್ ಠಾಣೆಗೆ ಮನವಿ ಮಾಡಿದೆ. ಈ ಕುರಿತು ಮಾತನಾಡಿದ ನಿರ್ಮಾಪಕ ಎ. ಮಂಜು, ನಾವು ಕಾನೂನು ಚೌಕಟ್ಟಿನಲ್ಲಿ ದೂರು ನೀಡಿದ್ದೇವೆ. ಇಲ್ಲದಿರುವುದನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಬರೆದುಕೊಳ್ಳುವ ಅಗತ್ಯವಿಲ್ಲ. ಈಗ ತಮಿಳು ನಿರ್ಮಾಪಕರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಚಿತ್ರರಂಗಕ್ಕೆ 200 ರಿಂದ 250 ಕೋಟಿ ರೂಪಾಯಿ ನಷ್ಟವಾಗಿದೆ.
ಚಂದ್ರಚೂಡ್ ಸ್ವತಃ ಸಿನಿಮಾ ಮಾಡಿದ್ದಾರಾ? ಚಿತ್ರರಂಗದ ಬಗ್ಗೆ ಹಗುರವಾಗಿ ಮಾತನಾಡಬಾರದು. ಬಂಡವಾಳ ಹಾಕಿದರೆ ಅದರ ಕಷ್ಟ ಗೊತ್ತಾಗುತ್ತದೆ. ಈಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ, ಭಾಷೆ ಎಂಬುದು ಮರೆಯಾಗುತ್ತಿದೆ. ತಮಿಳು ಆಗಲಿ, ಬೇರೆ ಯಾರಿಗೂ ಹೀಗೆ ಆಗಬಾರದು ಎಂದು ಹೇಳುವ ಮೂಲಕ ಚಂದ್ರಚೂಡ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
PublicNext
02/02/2026 07:47 pm