ಶಿವಮೊಗ್ಗ : ಶಿಕ್ಷಕರೊಬ್ಬರ ಬ್ಯಾಂಕ್ ಖಾತೆಯಿಂದ ಅನಾಮಧೇಯ ವ್ಯಕ್ತಿಗಳು ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿ ನಾಲ್ಕು ಕಂತುಗಳಲ್ಲಿ ಒಟ್ಟು ರೂ,2,02,375 ಹಣ ಖಾತೆಯಿಂದ ಕಡಿತವಾಗಿದೆ. ಶಿವಮೊಗ್ಗದ ಕೆನರಾ ಬ್ಯಾಂಕಿನ ಶಾಖೆಯೊಂದರಲ್ಲಿ 1996 ರಿಂದ ವೇತನ ಖಾತೆ ಹೊಂದಿದ್ದಾರೆ.
ಈಚೆಗೆ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತವಾಗಿರುವ ಸಂದೇಶ ಬಂದಿದೆ. ಕೂಡಲೇ ಅವರು ಬ್ಯಾಂಕಿಗೆ ತೆರಳಿ ಖಾತೆಯನ್ನು ಬ್ಲಾಕ್ ಮಾಡಿಸಿ, ಸೈಬರ್ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಅವರ ಓವರ್ ಡ್ರಾಫ್ಟ್ ಖಾತೆಯಿಂದ ಈ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಓ.ಡಿ. ಖಾತೆಯ ಹಣ ಪಡೆಯಲು ಖಾತೆದಾರರು ಖುದ್ದಾಗಿ ಬ್ಯಾಂಕಿಗೆ ಹಾಜರಾಗಿ ಚೆಕ್ ಮೂಲಕ ಮಾತ್ರ ಪಡೆಯಲು ಅವಕಾಶವಿದೆ. ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ವರ್ಗಾವಣೆಗೆ ಅವಕಾಶವಿಲ್ಲ. ಆದರೂ ಹಣ ವರ್ಗಾವಣೆ ಆಗಿದ್ದು ಹೇಗೆ ಎಂಬ ಅನುಮಾನವಿದೆ ಎಂದು ಶಿಕ್ಷಕ ದೂರಿನಲ್ಲಿ ಆರೋಪಿಸಿದ್ದಾರೆ.ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/02/2026 07:12 pm
LOADING...