ರಬಕವಿ-ಬನಹಟ್ಟಿ: ಬನಹಟ್ಟಿ ನಗರದ ಕೆಎಚ್ಡಿಸಿ ಕಾಲನಿಯ ಕಚೇರಿ ಆವರಣದಲ್ಲಿ ಕೈಮಗ್ಗ ನಿರತ ನೇಕಾರರು ಮಂಗಳವಾರ ದಿಢೀರ್ ಪ್ರತಿಭಟನೆ ಕೈಗೊಂಡರು. ನೂರಾರು ನೇಕಾರರು ಸೇರಿ ನಗದು ರೂಪದಲ್ಲಿ ಹಣ ಪಾವತಿಸುವಂತೆ ಒತ್ತಾಯಿಸಿದರು.
ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸುತ್ತಾ, ನೇಕಾರರು ವೇತನ ಪಡೆದುಕೊಂಡು ಸಂತೆ ಮಾಡಿ, ಜೀವನ ನಡೆಸುವಂತಹ ಕುಟುಂಬಗಳಾಗಿದ್ದು, ಸರ್ಕಾರವು "ಪರಿವರ್ತನಾ ಶುಲ್ಕ" ಎಂಬ ನೀತಿಯಡಿಯಲ್ಲಿ ನೇರಹಣ ನೀಡದೆ ಬಾಂಕುಗಳಿಗೆ ಜಮೆ ಮಾಡುತ್ತಿರುವುದರಿಂದ ಬಹುತೇಕ ಅನಕ್ಷರಸ್ಥರಾದ ಬಡನೇಕಾರರು ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ತೊಂದರೆಯಾಗುವುದರ ಜೊತೆಗೆ ಸಂತೆ ಖರೀದಿಗೂ ಕೂಡ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಆದಕಾರಣ ನಗದು ರೂಪದಲ್ಲಿ ಹಣ ಕೊಡಿ, ಇಲ್ಲವೇ ಇಲ್ಲಿಯೇ ಬ್ಯಾಂಕ್ ಖಾತೆಗಳ ಮೂಲಕ ಹಣ ಪಾವತಿಸುವ ವ್ಯವಸ್ಥೆಯನ್ನು ಸ್ಥಳದಲ್ಲಿಯೇ ಮಾಡಬೇಕೆಂದು ಒತ್ತಾಯಿಸಿದರು. ಕೆಎಚ್ಡಿಸಿ ನಿಗಮದ ಅಧಿಕಾರಿ ವಿಜಯಕುಮಾರ ಅವರೊಂದಿಗೆ ನೇಕಾರರ ನಡುವೆ ವಾಗ್ವಾದ ನಡೆಯಿತು. ಬದಲಾದ ಯೋಜನೆಯ ಕುರಿತಂತೆ ಅವರು ಮಾಹಿತಿ ನೀಡಿದರು. ಇದೆ ಸಂದರ್ಭದಲ್ಲಿ ಕಾಲನಿಯ ನೂರಾರು ನೇಕಾರರು ಭಾಗಿಯಾಗಿ ವಾರದ ನೆಯ್ಗೆ ಕಟ್ಟುಗಳನ್ನು ಇಟ್ಟುಕೊಂಡು ಪ್ರತಿಭಟಿಸಿದರು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ ಕೈಗೊಂಡಿತ್ತು.
Kshetra Samachara
10/03/2026 08:09 pm