ಚಿಂತಾಮಣಿ: ಮದುವೆಯಾದ ಕೇವಲ 15 ದಿನಗಳಲ್ಲಿ ಪತಿಗೆ ಕೈಕೊಟ್ಟು ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಯುವತಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಭಾಸ್ಕರ್ ಎಂಬುವವರು ವಿವಾಹವಾಗಲು ಹುಡುಗಿಯ ಹುಡುಕಾಟದಲ್ಲಿದ್ದರು. ಈ ವೇಳೆ ಕೆಲವು ಬ್ರೋಕರ್ ಗಳು ಸಂಪರ್ಕಕ್ಕೆ ಬಂದ ಭಾಸ್ಕರ್ ಅವರಿಗೆ, ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ನೇತ್ರಾ ಎಂಬಾಕೆಯ ಪರಿಚಯ ಮಾಡಿಕೊಡಲಾಗಿತ್ತು. ಬ್ರೋಕರ್ ಗಳ ಮಾತು ನಂಬಿದ ಭಾಸ್ಕರ್, ಒಂದೇ ದಿನದಲ್ಲಿ ಹುಡುಗಿಯನ್ನು ನೋಡಿ, ಅದೇ ದಿನ ವಿವಾಹವಾಗಲು ಒಪ್ಪಿಕೊಂಡಿದ್ದರು. ಬಳಿಕ ಅದೇ ದಿನ ಸರಳವಾಗಿ ಕುಟುಂಬದ ಸಮ್ಮುಖದಲ್ಲಿ ವಿವಾಹವೂ ಆಗಿತ್ತು.
ಮದುವೆಯಾದ ನಂತರ ಈ ನವಜೋಡಿ ಚಿಂತಾಮಣಿ ತಾಲ್ಲೂಕಿನ ಗೌನಿಚೆರುವುಪಲ್ಲಿ ಗ್ರಾಮದಲ್ಲಿರುವ ಪತಿಯ ಮಾವ ವೆಂಕಟರಮಣ ರೆಡ್ಡಿ ಅವರ ಮನೆಯಲ್ಲಿದ್ದರು.
ಕಳೆದ 15 ದಿನಗಳಿಂದ ಸಂಸಾರ ನಡೆಸುತ್ತಿದ್ದ ನೇತ್ರಾ, ಇತ್ತೀಚೆಗೆ ಭಾಸ್ಕರ್ ಅವರು ಕೆಲಸದ ನಿಮಿತ್ತ ಮದನಪಲ್ಲಿಗೆ ತೆರಳಿದ್ದರು. ಗಂಡ ಮನೆಯಲ್ಲಿ ಇಲ್ಲದ ಸಮಯವನ್ನೇ ಬಳಸಿಕೊಂಡ ನೇತ್ರಾ, ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಭಾಸ್ಕರ್ ಮದನಪಲ್ಲಿಯಿಂದ ಹಿಂದಿರುಗಿ ಬರುವಷ್ಟರಲ್ಲಿ ಪತ್ನಿ ನಾಪತ್ತೆಯಾಗಿದ್ದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ಬಳಿಕ ಈ ಯುವತಿಯ ಬಗ್ಗೆ ತಿಳಿಯುತ್ತಿದ್ದಂತೆ ಭಾಸ್ಕರ್ ಮತ್ತಷ್ಟು ಶಾಕ್ ಗೆ ಒಳಗಾಗಿದ್ದಾರೆ. ಕಾರಣ, ಯುವತಿಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳು ಸಹ ಇವೆ ಎಂದು ತಿಳಿದುಬಂದಿದೆ.
ಈ ಕುರಿತು ಬ್ರೋಕರ್ ಗಳು ಹಾಗೂ ನೇತ್ರಾಳ ಕುಟುಂಬದವರು ಭಾಸ್ಕರ್ ಗೆ ತಿಳಿಸಿರಲಿಲ್ಲ. ಕೂಡಲೇ ಭಾಸ್ಕರ್ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ.ಬ್ರೋಕರ್ ಗಳು ಮತ್ತು ನೇತ್ರಾ ಸೇರಿಕೊಂಡು ತನಗೆ ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
-ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
19/03/2026 09:58 pm