ಲಕ್ನೋ: ದೇವಸ್ಥಾನದ ಪವಿತ್ರ ನೀರಿಗೆ ಇಫ್ತಾರ್ ಕೂಟದ ಮಾಂಸಾಹಾರದ ಎಂಜಲು ಎಸೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸಿರ್ಸಿಯಾದ ಸೋನ್ಪಾತ್ರಿ ಆಶ್ರಮ ಬಳಿಯ ಸಿಹಿನೀರಿನ ತೊರೆಗೆ ಮಾಂಸಾಹಾರದ ಎಂಜಲುಗಳನ್ನು ಎಸೆಯಲಾಗಿತ್ತು. ಈ ಸಂಬಂಧ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿರ್ಸಿಯಾ ಪೊಲೀಸ್ ಅಧಿಕಾರಿ ಸತೀಶ್ ಕುಮಾರ್ , ಈ ಘಟನೆ ಕುರಿತು ಮಾರ್ಚ್ 19 ರಂದು ಆಶ್ರಮದ ಮುಖ್ಯಸ್ಥ ಹರಿ ಶರಣಾನಂದ ಅವರು ಲಿಖಿತ ದೂರು ನೀಡಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಮಾರ್ಚ್ 17ರ ಸಂಜೆ ದೇವಸ್ಥಾನದ ಪಕ್ಕದಲ್ಲಿರುವ ಸಿಹಿನೀರಿನ ತೊರೆಯ ಬಳಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಈ ಕೂಟದಲ್ಲಿ ಮಾಂಸಾಹಾರಿ ಆಹಾರವನ್ನು ಬಡಿಸಲಾಗಿತ್ತು. ಇಫ್ತಾರ್ ನಂತರ, ಕೂಟದ ಆಯೋಜಕರು ಆಶ್ರಮವು ಅಡುಗೆ ಮಾಡಲು, ಕುಡಿಯಲು ಮತ್ತು ವಿಗ್ರಹಗಳನ್ನು ತೊಳೆಯಲು ನೀರನ್ನು ಪಡೆಯುವ ಸಿಹಿನೀರಿನ ತೊರೆಗೆ ಮಾಂಸಾಹಾರದ ಎಂಜಲುಗಳನ್ನು ಎಸೆದಿದ್ದಾರೆ. ಇದನ್ನು ಪ್ರಶ್ನಿಸಿದಾಗ, ಆಯೋಜಕರು ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕೃತ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕಾನೂನು ಕ್ರಮ ಮತ್ತು ಆರೋಪಿಗಳು
ದೂರಿನ ಆಧಾರದ ಮೇಲೆ, ಸಿರ್ಸಿಯಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ದ್ವೇಷ ಮತ್ತು ಅಸಂಗತತೆಯನ್ನು ಉತ್ತೇಜಿಸುವ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಹರ್ದತ್ನಗರ ಗಿರಾಂತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹ್ರು ಮೂರ್ತಿಹಾ ಗ್ರಾಮದ ನಿವಾಸಿಗಳಾದ ಜಮಾಲ್ ಅಹ್ಮದ್, ಇರ್ಫಾನ್ ಅಹ್ಮದ್, ಇಮ್ರಾನ್ ಅಹ್ಮದ್ ಮತ್ತು ಜಹೀರ್ ಖಾನ್ ಎಂಬ ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಸಿಒ ಶರ್ಮಾ ಮಾಹಿತಿ ನೀಡಿದ್ದಾರೆ.
ವಾರಣಾಸಿಯಲ್ಲೂ ಇದೇ ರೀತಿಯ ಘಟನೆ
ಇದೇ ರೀತಿಯ ಇನ್ನೊಂದು ಘಟನೆ ಈ ವಾರದ ಆರಂಭದಲ್ಲಿ ವಾರಣಾಸಿಯಲ್ಲಿ ವರದಿಯಾಗಿದೆ. ಗಂಗಾ ನದಿಯಲ್ಲಿ ದೋಣಿಯ ಮೇಲೆ ಇಫ್ತಾರ್ ಕೂಟದ ಸಂದರ್ಭದಲ್ಲಿ ಚಿಕನ್ ಬಿರಿಯಾನಿ ಸೇವಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಅಲ್ಲಿ 14 ಜನರನ್ನು ಬಂಧಿಸಲಾಗಿತ್ತು. ಸ್ಥಳೀಯ ಬಿಜೆಪಿ ಯುವ ಮೋರ್ಚಾ ನಾಯಕರ ದೂರಿನ ಮೇರೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮತ್ತು ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
PublicNext
21/03/2026 05:00 pm