ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ ಘಟನೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಳದಾಳ್ ಪಾಳ್ಯದಲ್ಲಿ ನಡೆದಿದೆ. ತ್ಯಾಗರಾಜ್ ಗೌಡ ಎಂಬುವವರ ಮಾಲೀಕತ್ವದ ಬಿಲ್ಲೇಶ್ವರ ಕಾಫಿ ತೋಟದಲ್ಲಿ ಮರಗಸಿ (ಕೊಂಬೆ ಕಡಿಯುವ) ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಚಿನ್ನರಾಜು ಎಂಬುವವರು ಮರದಿಂದ ಬಿದ್ದು ಮೃತಪಟ್ಟಿದ್ದಾರೆ.
ಕಳೆದ 25 ದಿನಗಳಿಂದ ಈ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಘಟನೆ ನಡೆದ ದಿನದಂದು ತಮಗೆ ಸುರಕ್ಷತಾ ಪರಿಕರಗಳಾದ ಹೆಲ್ಮೆಟ್, ಗ್ರಿಪ್ಪರ್, ಸೊಂಟಕ್ಕೆ ಕಟ್ಟುವ ಹಗ್ಗ ಮತ್ತು ಏಣಿಯನ್ನು ನೀಡುವಂತೆ ಮಾಲೀಕರು ಹಾಗೂ ಮೇಸ್ತ್ರಿ ಪರುವತನ್ ಅವರಿಗೆ ಮನವಿ ಮಾಡಿದ್ದರು. ಆದರೆ, ಯಾವುದೂ ಆಗುವುದಿಲ್ಲ ಎಂದು ನಿರ್ಲಕ್ಷ್ಯ ತೋರಿದ ಮಾಲೀಕರು ಬಲವಂತವಾಗಿ ಮರ ಹತ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗರ್ಗೆ ಮರವನ್ನೇರಿ ಕೊಂಬೆ ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕೊಂಬೆ ಮುರಿದು ಚಿನ್ನರಾಜು ಅವರು ಕೆಳಕ್ಕೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಚಿಕ್ಕಮಗಳೂರಿನ ಎಂ.ಜಿ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮೃತರ ಮಗ ಅಜಿತ್ ಕುಮಾರ್ ನೀಡಿದ ದೂರಿನ ಮೇರೆಗೆ ತೋಟದ ಮಾಲೀಕರು, ರೈಟರ್ ಮತ್ತು ಮೇಸ್ತ್ರಿ ವಿರುದ್ಧ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/03/2026 08:40 pm
LOADING...