ಶಿವಮೊಗ್ಗ: ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ಮೂವರು ಖದೀಮರು ಹುಬ್ಬಳ್ಳಿಯ ವ್ಯಕ್ತಿಗೆ 4 ಲಕ್ಷ ರೂ. ವಂಚಿಸಿದ್ದಾರೆ. ಹಳೇ ಹುಬ್ಬಳ್ಳಿಯ 55ನೇ ವಾರ್ಡ್ನ 63 ವರ್ಷದ ವ್ಯಕ್ತಿಗೆ 6 ತಿಂಗಳ ಹಿಂದೆ ಅಶೋಕ್ ಎಂಬ ಹೆಸರೇಳಿಕೊಂಡು ವ್ಯಕ್ತಿಯೊಬ್ಬ ಫೋನ್ ಮೂಲಕ ಪರಿಚಯಿಸಿಕೊಂಡಿದ್ದ. ತಾನು ಮೈಸೂರು ಮೂಲದವನೆಂದು, ಮನೆಯ ಪಾಯ ತೆಗೆಯುವಾಗ ಹಳೆಯ ಕಾಲದ ಬಂಗಾರದ ನಾಣ್ಯಗಳು ದೊರಕಿವೆ. ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆಂದು ಹೇಳಿದ್ದ. ಆತನ ಮಾತು ನಂಬಿದ ಹುಬ್ಬಳ್ಳಿಯ ವ್ಯಕ್ತಿ ನಾಣ್ಯಗಳನ್ನು ಖರೀದಿಸಲು ಒಪ್ಪಿಕೊಂಡಿದ್ದ. ಅದರಂತೆ ಮಾ.10ರಂದು ಶಿವಮೊಗ್ಗದ ಸಾಗರ ರಸ್ತೆಯ ಶ್ರೀರಾಂಪುರ ಹತ್ತಿರದ ಹೈವೇ ಪಕ್ಕದಲ್ಲಿ ಭೇಟಿಯಾದ ಇಬ್ಬರು ಸ್ಯಾಂಪಲ್ಗೆಂದು ಒಂದು ಅಸಲಿ ಬಂಗಾರದ ನಾಣ್ಯ ನೀಡಿ 101 ರೂ. ಪಡೆದಿದ್ದರು. ಹುಬ್ಬಳ್ಳಿ ವ್ಯಕ್ತಿ ವಾಪಸ್ ತೆರಳಿ ಆ ನಾಣ್ಯವನ್ನು ಪರಿಶೀಲಿಸಿದಾಗ ಅದು ಅಸಲಿ ಬಂಗಾರವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು 200 ಗ್ರಾಂ ನಾಣ್ಯಗಳಿಗೆ 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಕೊನೆಗೆ 4 ಲಕ್ಷ ರೂ.ಗೆ ಒಪ್ಪಂದವಾಗಿತ್ತು. ಮಾ.13ರಂದು ಪುನಃ ಶಿವಮೊಗ್ಗಕ್ಕೆ ಬಂದ ಹುಬ್ಬಳ್ಳಿಯ ವ್ಯಕ್ತಿ 4 ಲಕ್ಷ ರೂ. ನೀಡಿ 200 ಗ್ರಾಂ ನಾಣ್ಯಗಳನ್ನು ಪಡೆದಿದ್ದರು. ಈ ವೇಳೆ ಮೊದಲ ಬಾರಿಗೆ ಬಂದಿದ್ದವನ ಜತೆ ಇನ್ನೊಬ್ಬ ಬಂದಿದ್ದ. ಹುಬ್ಬಳ್ಳಿಗೆ ತೆರಳಿ ಪರಿಶೀಲಿಸಿದಾಗ ಆ ಎಲ್ಲ ನಾಣ್ಯಗಳು ನಕಲಿ ಎಂದು ತಿಳಿದುಬಂದಿದೆ. ತಕ್ಷಣವೇ ಆರೋಪಿಗಳಿಗೆ ಫೋನ್ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/04/2026 11:19 am