ಮುಂಬೈ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಪ್ಲಾಟ್ಫಾರ್ಮ್ ಮತ್ತು ಹಳಿಗಳ ಮಧ್ಯೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ಟಿಕೆಟ್ ಪರೀಕ್ಷಕ (TTE) ಅದ್ಭುತವಾಗಿ ರಕ್ಷಿಸಿದ್ದಾರೆ. ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಗಳು ಈಗ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿವೆ.
ಮುಂಬೈನ ಬೊರಿವಲಿ ನಿಲ್ದಾಣಕ್ಕೆ ವೇಗವಾಗಿ ಬಂದ ಯುವ ಎಕ್ಸ್ಪ್ರೆಸ್ (Yuva Express) ರೈಲು ಅಲ್ಲಿ ನಿಲುಗಡೆ ಹೊಂದಿರಲಿಲ್ಲ. ಆದರೆ, ರೈಲು ನಿಧಾನವಾಗುತ್ತಿದ್ದಂತೆ ಚಲಿಸುತ್ತಿದ್ದ ರೈಲಿನಿಂದಲೇ ಇಳಿಯಲು ಹೋದ ಪ್ರಯಾಣಿಕನೊಬ್ಬ ಆಯತಪ್ಪಿ ಬಿದ್ದಿದ್ದಾನೆ. ಆತ ಪ್ಲಾಟ್ಫಾರ್ಮ್ ಮತ್ತು ಚಲಿಸುತ್ತಿದ್ದ ರೈಲಿನ ನಡುವಿನ ಅಪಾಯಕಾರಿ ಗ್ಯಾಪ್ಗೆ ಜಾರುತ್ತಿದ್ದಾಗ, ಅಲ್ಲಿಯೇ ಇದ್ದ ಟಿಟಿಇ ರಂಜಿತ್ ಯಾದವ್ ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತರಾದರು.
ಪ್ರಯಾಣಿಕ ಕೆಳಕ್ಕೆ ಬೀಳುತ್ತಿದ್ದಂತೆಯೇ ಅಲ್ಲಿಯೇ ಇದ್ದ ಇತರ ಸಿಬ್ಬಂದಿ ಗಾಬರಿಗೊಂಡರು. ಆದರೆ ರಂಜಿತ್ ಯಾದವ್ ಅವರು ಕ್ಷಣಾರ್ಧದಲ್ಲಿ ಆತನನ್ನು ಹಿಡಿದು ಹಿಂದಕ್ಕೆ ಎಳೆದಿದ್ದಾರೆ. ಒಂದು ವೇಳೆ ರಂಜಿತ್ ಅವರು ಸೆಕೆಂಡ್ಗಳಷ್ಟು ತಡ ಮಾಡಿದ್ದರೂ, ಪ್ರಯಾಣಿಕ ರೈಲಿನ ಚಕ್ರದ ಅಡಿಗೆ ಬೀಳುವ ಸಾಧ್ಯತೆಯಿತ್ತು.
ರಂಜಿತ್ ಯಾದವ್ ಅವರ ಈ ಸಾಹಸದ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರು ಅವರ ಧೈರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ.
PublicNext
03/04/2026 10:27 pm