ಎನ್.ಆರ್ ಪುರ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ, ಮಾಕೋಡು ಮತ್ತು ಜೇನುಕಟ್ಟೆಸರ ಗ್ರಾಮಗಳ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ವಿಮಾನವೊಂದು ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸಿದೆ.
ಈ ಹಾರಾಟವು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ವತಿಯಿಂದ ನಡೆಯುತ್ತಿರುವ ವಿಶೇಷ 'ವಾಯುಗಾಮಿ ಭೂಭೌತಿಕ ಸಮೀಕ್ಷೆ'ಯ ಭಾಗವಾಗಿದ್ದು, ಭೂಗರ್ಭದಲ್ಲಿರುವ ಅಮೂಲ್ಯ ಖನಿಜ ನಿಕ್ಷೇಪಗಳು ಹಾಗೂ ಜಲ ಸಂಪನ್ಮೂಲಗಳನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿದೆ. ಈ ಕಾರ್ಯಾಚರಣೆಗಾಗಿ ಸೆಸ್ನಾ ಕ್ಯಾರವಾನ್ 208 ಬಿ ಮಾದರಿಯ ಅತ್ಯಾಧುನಿಕ ವಿಮಾನಗಳನ್ನು ಬಳಸಲಾಗುತ್ತಿದ್ದು, ಅದರ ಹಿಂಭಾಗದಲ್ಲಿ ಅಳವಡಿಸಲಾಗಿರುವ ಮ್ಯಾಗ್ನೆಟೋಮೀಟರ್ ಸ್ಟಿಂಗರ್ ಎಂಬ ಸಾಧನವು ಭೂಮಿಯ ಚುಂಬಕ ವ್ಯತ್ಯಾಸಗಳನ್ನು ನಿಖರವಾಗಿ ಅಳೆಯುತ್ತಿದೆ.
ಮೆಸರ್ಸ್ ಎಕ್ಸ್ಕ್ಯಾಲಿಬರ್ ಮೆಕ್ಫಾರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಈ ಯೋಜನೆಯ ಜವಾಬ್ದಾರಿ ಹೊತ್ತಿದ್ದು, ಆಸ್ಟ್ರೇಲಿಯಾ ಮೂಲದ ತಜ್ಞರು ಮತ್ತು ವಿದೇಶಿ ಪೈಲಟ್ಗಳ ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆಯುತ್ತಿದೆ.
ಡಿಜಿಸಿಎ ನಿಯಮಾವಳಿಗಳ ಅನ್ವಯವೇ ಈ ಎಲ್ಲಾ ಪ್ರಕ್ರಿಯೆಗಳು ಜರುಗುತ್ತಿದ್ದು, 2026ರ ಜುಲೈ 31ರವರೆಗೆ ಸಮೀಕ್ಷೆಯು ಮುಂದುವರಿಯಲಿದೆ. ಇದು ಕೇವಲ ವೈಜ್ಞಾನಿಕ ಉದ್ದೇಶದ ಕಾರ್ಯವಾಗಿರುವುದರಿಂದ ಸ್ಥಳೀಯರು ಯಾವುದೇ ರೀತಿಯ ಆತಂಕ ಅಥವಾ ಭಯ ಪಡುವ ಅಗತ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ವಾಯುಗಾಮಿ ಸಮೀಕ್ಷೆಯು ರಾಜ್ಯದ ಭೂಗರ್ಭ ಸಂಪತ್ತಿನ ನಕ್ಷೆ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
PublicNext
05/04/2026 03:48 pm
LOADING...