ಚಿಕ್ಕಮಗಳೂರು: ಕಾಫಿನಾಡಿನಲ್ಲಿ ನಗರದಲ್ಲಿ ಆಟೋರಿಕ್ಷಾ ಚಾಲಕರು ಇಂಧನದ ಸಮಸ್ಯೆಯಿಂದಾಗಿ ಹೈರಾಣಾಗಿದ್ದು, ಆಟೋ ಗ್ಯಾಸ್ಗಾಗಿ ಕಿಲೋಮೀಟರ್ಗಟ್ಟಲೆ ಉದ್ದದ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಒಂದು ವಾರಗಳ ಸುದೀರ್ಘ ಕಾಯುವಿಕೆಯ ನಂತರ ಕಾಫಿನಾಡಿಗೆ ಗ್ಯಾಸ್ ಪೂರೈಕೆಯಾಗಿದೆ. ತೇಗೂರು ಬಳಿಯ ಇಂಡಿಯನ್ ಆಯಿಲ್ ಬಂಕ್ ಗೆ ಗ್ಯಾಸ್ ಟ್ಯಾಂಕರ್ ಆಗಮಿಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಆಟೋಗಳು ಎರಡು ಕಿಲೋಮೀಟರ್ಗೂ ಅಧಿಕ ದೂರ ಸರದಿ ಸಾಲಿನಲ್ಲಿ ನಿಂತಿವೆ.
ಇಷ್ಟೊಂದು ಸರದಿಯಲ್ಲಿ ನಿಂತರೂ ಸಹ ಪ್ರತಿ ಆಟೋಗೆ ಕೇವಲ 700 ರೂಪಾಯಿ ಮೌಲ್ಯದ ಗ್ಯಾಸ್ ಮಾತ್ರ ನೀಡಲಾಗುತ್ತಿದ್ದು, ಹೆಚ್ಚಿನ ಹಣ ನೀಡಲು ಸಿದ್ಧವಿದ್ದರೂ ಇಂಧನ ಲಭ್ಯವಾಗುತ್ತಿಲ್ಲ. ಕಳೆದ ಒಂದು ವಾರದಿಂದ ಗ್ಯಾಸ್ ಕೊರತೆಯಿಂದಾಗಿ ಚಾಲಕರು ತಮ್ಮ ಆಟೋಗಳನ್ನು ಮನೆ ಅಥವಾ ಶೆಡ್ಗಳಲ್ಲಿ ನಿಲ್ಲಿಸುವಂತಾಗಿತ್ತು. ಇದರಿಂದಾಗಿ ದಿನನಿತ್ಯದ ಬಾಡಿಗೆ ಇಲ್ಲದೆ, ಬ್ಯಾಂಕ್ ಇಎಂಐ ಕಟ್ಟಲಾಗದೆ ಮತ್ತು ಕುಟುಂಬ ನಿರ್ವಹಣೆ ಮಾಡಲಾಗದೆ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆಟೋ ಚಾಲಕರ ನೆರವಿಗೆ ಬರಬೇಕು ಹಾಗೂ ಇಂಧನ ಪೂರೈಕೆಯ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಚಿಕ್ಕಮಗಳೂರು ನಗರದ ಆಟೋ ಚಾಲಕರು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಗ್ಯಾಸ್ ಪೂರೈಕೆ ಆಗಿರೋದು ಆಟೋ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.
PublicNext
05/04/2026 03:51 pm
LOADING...