ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಸ್ಥಿತಿ ಅತಿ ಭೀಕರ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಇರಾನ್ನಲ್ಲಿರುವ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯು ಅತ್ಯಂತ ತುರ್ತು 'ಅಡ್ವೈಸರಿ' (Advisory) ಹೊರಡಿಸಿದೆ. ಮುಂದಿನ 48 ಗಂಟೆಗಳ ಕಾಲ ಎಲ್ಲರೂ ಇದ್ದಲ್ಲೇ ಸುರಕ್ಷಿತವಾಗಿರಬೇಕು (Shelter in place) ಮತ್ತು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಸಂಚರಿಸಬಾರದು ಎಂದು ಸೂಚಿಸಲಾಗಿದೆ.
ಟೆಹರಾನ್ನಲ್ಲಿರುವ ಭಾರತದ ರಾಯಭಾರ ಕಚೇರಿಯು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸಲು ತಿಳಿಸಿದೆ.
*ಮುಂದಿನ 48 ಗಂಟೆಗಳ ಕಾಲ ಭಾರತೀಯರು ತಮ್ಮ ಮನೆ ಅಥವಾ ಸುರಕ್ಷಿತ ಸ್ಥಳಗಳಲ್ಲೇ ಉಳಿಯಬೇಕು.
*ಮಿಲಿಟರಿ ನೆಲೆಗಳು, ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿರುವ ಪ್ರದೇಶಗಳಿಗೆ ಹತ್ತಿರ ಸುಳಿಯಬಾರದು.
*ಬಹುಮಹಡಿ ಕಟ್ಟಡಗಳಲ್ಲಿ ಇರುವವರು ಸಾಧ್ಯವಾದಷ್ಟು ಮೇಲಿನ ಅಂತಸ್ತುಗಳಲ್ಲಿ ಇರುವುದನ್ನು ತಪ್ಪಿಸಬೇಕು. ಕೆಳಮಹಡಿ ಅಥವಾ ಸುರಕ್ಷಿತ ಬಂಕರ್ಗಳಲ್ಲಿ ಇರುವುದು ಉತ್ತಮ.
* ಸಾರ್ವಜನಿಕವಾಗಿ ಗುಂಪು ಸೇರುವುದು ಅಥವಾ ಪ್ರತಿಭಟನೆ ನಡೆಯುವ ಸ್ಥಳಗಳಿಗೆ ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಹೋರ್ಮುಜ್ ಜಲಸಂಧಿ'ಯನ್ನು ಮುಕ್ತಗೊಳಿಸಲು ನೀಡಿರುವ ಡೆಡ್ಲೈನ್ ಇಂದು (ಏಪ್ರಿಲ್ 7, 2026) ಮುಕ್ತಾಯಗೊಳ್ಳಲಿದೆ. ಈ ಬೆನ್ನಲ್ಲೇ ಇರಾನ್ನ ಹಲವು ಪ್ರಮುಖ ನಗರಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿವೆ. ಈ ದಾಳಿಗಳು ಯಾವುದೇ ಕ್ಷಣದಲ್ಲಿ ಇರಾನ್ನ ರಾಜಧಾನಿ ಟೆಹರಾನ್ ಸೇರಿದಂತೆ ಪ್ರಮುಖ ನಾಗರಿಕ ಸೌಲಭ್ಯಗಳ ಮೇಲೆ ವಿಸ್ತರಣೆಯಾಗುವ ಭೀತಿ ಇರುವುದರಿಂದ ಭಾರತ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಇರಾನ್ನಲ್ಲಿರುವ ಭಾರತೀಯರು ತಮ್ಮ ಪಾಸ್ಪೋರ್ಟ್ ಮತ್ತು ಗುರುತಿನ ಚೀಟಿಗಳನ್ನು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು. ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.
PublicNext
07/04/2026 09:31 pm