ಮಂಗಳೂರು: ಮೈಸೂರಿನ ನಂಜನಗೂಡು ಯುವಕನೋರ್ವನಿಗೆ ಬಲವಂತವಾಗಿ ಮಂಗಳಮುಖಿ ವೇಷ ತೊಡಿಸಿ ಕಲೆಕ್ಷನ್ ಮಾಡಿಸಿರುವ ಬಗ್ಗೆ ಅನಿ ಮಂಗಳೂರು ಮೇಲಿನ ಆರೋಪ ತನಿಖೆಯಾಗಲಿ. ಈ ಬಗ್ಗೆ ನಾವು ಪೊಲೀಸ್ ದೂರು ನೀಡಲಿದ್ದೇವೆ ಎಂದು ಮಂಗಳೂರು ನವಸಹಜ ಸಮುದಾಯ ಸಂಘಟನೆ ಆಗ್ರಹಿಸಿದೆ.
ಈ ಬಗ್ಗೆ ನವಸಹಜ ಸಮುದಾಯ ಸಂಘಟನೆಯ ನಿಖಿಲಾ ಮಾತನಾಡಿ, ಕೆಲ ತಿಂಗಳ ಹಿಂದೆ ನಂಜನಗೂಡು ಮೂಲದ ವ್ಯಕ್ತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡ ಹನಿ ಮಂಗಳೂರು ತನ್ನೊಂದಿಗೆ ಇರಿಸಿಕೊಂಡಿದ್ದರು. ಬಳಿಕ ನವಸಹಜ ಸಮುದಾಯ ಸಂಘಟನೆಗೆ ತಿಳಿಸದೆ ಆತನಿಗೆ ಮಂಗಳೂರಿನ ವಿಳಾಸದಲ್ಲಿ ಆಧಾರ್ ಕಾರ್ಡ್ ಹಾಗೂ ರಾಷ್ಟ್ರೀಯ ಟ್ರಾನ್ಸ್ಜೆಂಡರ್ ಗುರುತಿನ ಚೀಟಿಯನ್ನು ಕೊಡಿಸಿದ್ದಾರೆ. ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸುಳ್ಳು ಮಾಹಿತಿಯನ್ನು ನೀಡಿ ಆತನಿಗೆ ಟ್ರಾನ್ಸ್ಜೆಂಡರ್ ಗುರುತಿನ ಚೀಟಿಯನ್ನು ನೀಡಿರುತ್ತಾರೆ. ತಿಂಗಳ ಹಿಂದೆ ಇಲ್ಲಿಂದ ಓಡಿ ಹೋದ ಆತ ಸಾಮಾಜಿಕ ಜಾಲತಾಣಗಳಲ್ಲಿ ಹನಿ ಮಂಗಳೂರು ತನಗೆ ಬಲವಂತವಾಗಿ ಲಿಂಗ ಪರಿವರ್ತನೆ ಮಾಡಿಸಲು ಹುನ್ನಾರ ರೂಪಿಸಿದ್ದಾರೆ ಎಂದು ಹೇಳಿದ್ದಲ್ಲದೆ ಜಿಲ್ಲೆಯ ಟ್ರಾನ್ಸ್ಜೆಂಡರ್ ಸಮುದಾಯದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾನೆ.
ಈ ವಿಚಾರಕ್ಕೂ ನವಸಹಜ ಸಮುದಾಯ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಬಗ್ಗೆ ಹನಿ ಮಂಗಳೂರು ತಪ್ಪು ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಪೊಲೀಸ್ ಇಲಾಖೆ ಕೂಲಂಕುಷವಾಗಿ ತನಿಖೆ ನಡೆಸಿ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಬೇಕು. ಅಲ್ಲದೆ ಹನಿ ಮಂಗಳೂರು ಅವರು ನವಸಹಜ ಸಮುದಾಯ ಸಂಘಟನೆಯ ಸದಸ್ಯೆಯಾಗಿ ಈ ರೀತಿ ಮಾಡಿರುವುದು ತಪ್ಪು. ಅಲ್ಲದೆ ಅವರನ್ನು ಸಂಘಟನೆಯಿಂದ ಉಚ್ಚಾಟನೆ ಮಾಡುತ್ತೇವೆ ಎಂದು ನಿಖಿಲಾ ಹೇಳಿದರು.
Kshetra Samachara
14/04/2026 04:15 pm
LOADING...