ಉಡುಪಿ: ರಬ್ಬರ್ ಟ್ಯಾಪಿಂಗ್ ವಿಚಾರದಲ್ಲಿ ಉಂಟಾದ ಜಗಳವು ನಂತರ ಆಸಿಡ್ ದಾಳಿಗೆ ತಿರುಗಿ, ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಕೇರಳ ರಾಜ್ಯದ ತ್ರಿಶೂರ ಜಿಲ್ಲೆಯ ನಿವಾಸಿ ಸುಧಿರ್.ಪಿ.ಎ ಅವರು ತಮ್ಮ ಕೆಲಸಗಾರ ರತೀಶ್.ಕೆ.ಟಿ ಜೊತೆ 28/02/2022ರಂದು ಚಾರ ಗ್ರಾಮದ ಮಂಡಾಡಿಜಡ್ಡು ಪ್ರದೇಶದಲ್ಲಿರುವ ಅಜಿತ್ ಅಗಸ್ಟಿನ್ ಅವರ ತೋಟದಲ್ಲಿ ಸಜೀಕುಮಾರ್ ಅವರ ಹುಟ್ಟುಹಬ್ಬಕ್ಕೆ ತೆರಳಿದ್ದರು. ಅಂದು ರಾತ್ರಿ ಇಬ್ಬರೂ ಮದ್ಯಪಾನ ಮಾಡಿದ್ದು, ಕೆಲಸದ ವಿಷಯವಾಗಿ ಜಗಳ ನಡೆದಿದೆ. ಈ ವೇಳೆ ನಡೆದ ತಳ್ಳಾಟದಲ್ಲಿ ಸುಧಿರ್ ಅವರ ಕೈಬೆರಳು ರತೀಶ್ ಅವರ ಕಣ್ಣಿಗೆ ತಾಗಿತ್ತು.
ಈ ಘಟನೆಗೆ ದ್ವೇಷಗೊಂಡ ರತೀಶ್.ಕೆ.ಟಿ ಅವರು 02/03/2022ರಂದು ಬೆಳಗಿನ ಜಾವ ಸುಮಾರು 1 ಗಂಟೆಗೆ ಸುಧಿರ್ ಅವರು ಮಲಗಿದ್ದ ವೇಳೆ ಅವರ ಮೇಲೆ ಬಿಸಿ ಕೆಮಿಕಲ್ ಎರಚಿ ಕೊಲೆ ಮಾಡಲು ಯತ್ನಿಸಿದ್ದರು.
ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಕ್ರೈಂ ನಂ. 09/2022) ದಾಖಲಾಗಿ, ಭಾರತೀಯ ದಂಡ ಸಂಹಿತೆಯ ಕಲಂ 326(A), 307, 504, 506 ಅನ್ವಯ ತನಿಖೆ ನಡೆಸಲಾಗಿತ್ತು. ತನಿಖೆಯನ್ನು ಪೊಲೀಸ್ ಉಪನಿರೀಕ್ಷಕರಾದ ಮಹೇಶ್ ಟಿ.ಎಮ್ ಹಾಗೂ ನಂತರ ಸುದರ್ಶನ ದೊಡಮನಿ ಅವರು ಪೂರ್ಣಗೊಳಿಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಂತಿಮ ಶಿಕ್ಷೆ ವಿಧಿಸಿದೆ.
ಆರೋಪಿಯಾದ ರತೀಶ್ ಕೆ.ಟಿ (42), ಕಣ್ಣೂರು ಜಿಲ್ಲೆಯ ನಿವಾಸಿ, ಅವರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹30,000 ದಂಡ ವಿಧಿಸಲಾಗಿದೆ. ಪ್ರಸ್ತುತ ಆರೋಪಿ ಹಿರಿಯಡ್ಕ ಕಾರಾಗೃಹದಲ್ಲಿದ್ದಾನೆ.
Kshetra Samachara
30/04/2026 10:27 am
LOADING...