ಭಟ್ಕಳ: ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿ ಇಲಾಖೆಯ 2024-25ನೇ ಸಾಲಿನ ಪಶ್ಚಿಮ ವಾಹಿನಿ ಯೋಜನೆಯಡಿ, ತಾಲೂಕಿನ ಮಾವಳ್ಳಿ-2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಚಾರಿಕೆರೆಯಿಂದ ಬೈಲಹೊಳೆಕಟ್ಟೆವರೆಗೆ ಎಡದಂಡೆ ಹಾಗೂ ಬಲದಂಡೆ ಖಾರ್ಲಾಂಡ್ ನಿರ್ಮಾಣ ಕಾಮಗಾರಿಗೆ ಸೇರಿದಂತೆ ಒಟ್ಟು 19 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರು ಚಾಲನೆ ನೀಡಿದರು.
ಸಚಿವರ ಭಾವುಕ ನುಡಿ
ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಸಚಿವ ಮಂಕಾಳ ವೈದ್ಯ, "ನಾನು ಬೈಲೂರಿನಲ್ಲಿ ಹುಟ್ಟಿದ್ದರೂ, ಕಳೆದ 25 ವರ್ಷಗಳಿಂದ ಇದೇ ಭಾಗದಲ್ಲಿ ವಾಸಿಸುತ್ತಿದ್ದೇನೆ. ಈ ಊರು ನನ್ನದು. ನನ್ನ ರಾಜಕೀಯ ಹಾಗೂ ವ್ಯಾಪಾರ ಜೀವನಕ್ಕೆ ಬೆಂಬಲ ನೀಡಿದ ಜನರನ್ನು ನಾನು ಎಂದಿಗೂ ಮರೆಯುವುದಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯನಿಂದ ಸಚಿವ ಸ್ಥಾನದವರೆಗೆ ನನ್ನನ್ನು ತಂದದ್ದು ಜನರ ವಿಶ್ವಾಸ," ಎಂದು ಭಾವುಕರಾದರು.
ಬಿಜೆಪಿ ವಿರುದ್ಧ ಟೀಕೆ ಮತ್ತು ಅಭಿವೃದ್ಧಿ ಬದ್ಧತೆ
"ಮಿನಿ ವಿಧಾನ ಸೌಧ ಮತ್ತು ಕೆ.ಎಸ್.ಆರ್.ಟಿ.ಸಿ. ಡಿಪೋ ನಿರ್ಮಾಣ ನನ್ನ ಕಲ್ಪನೆಯಾಗಿತ್ತು. ಆದರೆ, ಬಿಜೆಪಿಯವರು ಅದನ್ನು ಮಾರಾಟ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಬಂದರೂ, ನಾನು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ನಿರತರಾಗಿದ್ದೇನೆ," ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ಯೋಜನೆಗಳು ಮತ್ತು ಸುಳ್ಳು ಪ್ರಚಾರ
"ನಮ್ಮ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಖಾತೆಗೆ ತಲುಪಿವೆ. ಉಚಿತ ಬಸ್ ಸೇವೆಯಂತಹ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ, ಸರ್ಕಾರ ದಿವಾಳಿ ಆಗುತ್ತಿದೆ ಎಂಬುದು ಬಿಜೆಪಿಯ ಸುಳ್ಳು ಪ್ರಚಾರ," ಎಂದು ಟೀಕಿಸಿದರು.
ಖಾರ್ಲಾಂಡ್ ಮತ್ತು ಕೈಕಿಣಿ ಅಭಿವೃದ್ಧಿ
ಖಾರ್ಲಾಂಡ್ ಕಾಮಗಾರಿಯ ಕುರಿತು ಮಾತನಾಡಿದ ಅವರು, "ಈ ಭಾಗದ ಜನರಿಗೆ ಅನುಕೂಲವಾಗುವಂತೆ ಒಂದು ವರ್ಷ ಕಾಯ್ದು ಯೋಜನೆಯನ್ನು ರೂಪಿಸಿದ್ದೇವೆ. ನಾವು ಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮ ಕೆಲಸವೇ ಮಾತನಾಡಬೇಕು. ಕಾಯ್ಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಡಿ 40 ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಕೈಗೊಂಡಿದ್ದೇನೆ," ಎಂದು ತಿಳಿಸಿದರು.
ಶಿಕ್ಷಣ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ
"ಜನರಿಂದ ಬಂದ ಮನವಿಗಳನ್ನು ನೆರವೇರಿಸಲು ನಾನು ಸದಾ ಪ್ರಯತ್ನಿಸುತ್ತೇನೆ. ಕಾಯ್ಕಿಣಿಯಲ್ಲಿ ಪಿಯು ಕಾಲೇಜು ಆರಂಭಕ್ಕೆ ಕ್ರಮ ಕೈಗೊಂಡಿದ್ದೇನೆ. ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ," ಎಂದು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಯ್ಕಿಣಿ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ನಾಯ್ಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ರಾಘವೇಂದ್ರ ಗೋಯ್ದಪ್ಪ ನಾಯ್ಕ, ಕುಪ್ಪಯ್ಯ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Kshetra Samachara
20/04/2026 08:29 pm