ಶ್ರೀನಗರ: ಕಾಶ್ಮೀರದ ಸುಂದರ ಕಣಿವೆಯಲ್ಲಿ ಕರಡಿಗಳು ಗಾಲ್ಫ್ ಆಡಲು ಬಂದರೆ ಹೇಗಿರುತ್ತೆ? ಇಂತದ್ದೊಂದು ಅಚ್ಚರಿಯ ಮತ್ತು ತಮಾಷೆಯ ಘಟನೆ ಶ್ರೀನಗರದ ಪ್ರಸಿದ್ಧ ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಮೈದಾನದಲ್ಲಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶುಕ್ರವಾರ (ಮೇ 1) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮೈದಾನದಲ್ಲಿ ಆಟಗಾರರು ಗಾಲ್ಫ್ ಆಡುತ್ತಿದ್ದ ಸಮಯದಲ್ಲಿ, ಅಚಾನಕ್ ಆಗಿ ಎರಡು ಕರಡಿಗಳು ಮೈದಾನಕ್ಕೆ ಎಂಟ್ರಿ ಕೊಟ್ಟಿವೆ. ಮೈದಾನದ ಹಸಿರು ಹುಲ್ಲಿನ ಮೇಲೆ ರಾಜಾರೋಷವಾಗಿ ಓಡಾಡಿದ ಈ ಕರಡಿಗಳು, ಅಲ್ಲಿ ನೆಟ್ಟಿದ್ದ ಗಾಲ್ಫ್ ಧ್ವಜವನ್ನು ಕಿತ್ತುಕೊಂಡು ಓಡಿಹೋಗಿವೆ!
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ವಿಡಿಯೋಗೆ ತಮಾಷೆಯಾಗಿ ಕ್ಯಾಪ್ಷನ್ ನೀಡಿದ್ದು, "ಕರಡಿಗಳು ಆಟವಾಡಲು ಬಂದಿವೆ, ಧ್ವಜವನ್ನು ಕದ್ದು ಕೆಲವೇ ಕ್ಷಣಗಳಲ್ಲಿ ಮಾಯವಾಗಿವೆ" ಎಂದು ಬರೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಹಿಮಾಲಯದ ಕಪ್ಪು ಕರಡಿಗಳು ಆಹಾರದ ಹುಡುಕಾಟದಲ್ಲಿ ಅಥವಾ ಹವಾಮಾನ ಬದಲಾವಣೆಯ ಸಮಯದಲ್ಲಿ ಕಾಡಿನಿಂದ ನಾಡಿನತ್ತ ಬರುತ್ತಿರುತ್ತವೆ. ಈ ಗಾಲ್ಫ್ ಮೈದಾನವು ಗುಡ್ಡಗಾಡು ಪ್ರದೇಶಕ್ಕೆ ಹತ್ತಿರವಿರುವುದರಿಂದ ಪ್ರಾಣಿಗಳು ಸುಲಭವಾಗಿ ಇಲ್ಲಿಗೆ ಬರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರದಲ್ಲಿ ಇತ್ತೀಚೆಗೆ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಪ್ರಾಣಿಗಳಿಂದ ದೂರವಿರಲು ಸ್ಥಳೀಯ ಆಡಳಿತ ಸೂಚನೆ ನೀಡಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು, "ಕರಡಿಗಳೂ ಕೂಡ ಸ್ವಲ್ಪ ರಿಲ್ಯಾಕ್ಸ್ ಆಗಲು ಗಾಲ್ಫ್ ಮೈದಾನಕ್ಕೆ ಬಂದಿವೆ" ಎಂದು ತಮಾಷೆ ಮಾಡುತ್ತಿದ್ದಾರೆ. ಪ್ರಕೃತಿ ಮತ್ತು ಮಾನವ ನಿರ್ಮಿತ ಸುಂದರ ತಾಣಗಳು ಒಂದಕ್ಕೊಂದು ಬೆರೆತಿರುವ ಕಾಶ್ಮೀರದ ಸೊಬಗಿಗೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ.
PublicNext
01/05/2026 08:37 pm