ಜಬಲ್ಪುರ: ತಾಯಿನೇ ಎಲ್ಲ.. ಬದಲಾಗೋದಿಲ್ಲ.. ತಾಯಿಯ ಪ್ರೀತಿ ತಾಯಿಯ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ತಾಯಿ ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಅಸಾಧ್ಯ. ತಾಯಿ ಮಗುವಿನ ನಡುವಿನ ಪ್ರೀತಿ, ಆ ಬೆಸುಗೆ ಬೇರೆಲ್ಲೂ ಕಾಣ ಸಿಗದು. ತಾಯಿಯಾದವಳ ಪ್ರೀತಿಯು ನಿಷ್ಕಲ್ಮಷ ಮತ್ತು ನಿಸ್ವಾರ್ಥ. ಈ ತಾಯಿಯ ಪ್ರೀತಿ ಜಲಸಮಾಧಿಯಲ್ಲೂ ಸಡಿಲಗೊಂಡಿಲ್ಲ.
ಮಧ್ಯಪ್ರದೇಶದ ಬರ್ಗಿ ಅಣೆಕಟ್ಟಿನ ನರ್ಮದಾ ನದಿಯಲ್ಲಿ ಸಂಭವಿಸಿದ ಕ್ರೂಸ್ ಬೋಟ್ ದುರಂತ ಇಡೀ ದೇಶದ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಪತ್ತೆಯಾದ ತಾಯಿ ಮತ್ತು ಆಕೆಯ ಪುಟ್ಟ ಮಗನ ಮೃತದೇಹಗಳು, ಸಾವಿನ ಭೀಕರ ಕ್ಷಣದಲ್ಲೂ ತಾಯಿಯ ಪ್ರೀತಿ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿವೆ.
ನರ್ಮದಾ ನದಿಯಲ್ಲಿ ಗುರುವಾರ ಪ್ರವಾಸಿಗರಿದ್ದ ಬೋಟ್ ಮಗುಚಿ 9 ಜನ ಮೃತಪಟ್ಟಿದ್ದಾರೆ. ಬೋಟ್ನಲ್ಲಿ 30 ಜನ ಇದ್ದರು. ಅದರಲ್ಲಿ 17 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 4 ಜನರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆದಿದೆ.
9 ಜನರ ಶವಗಳನ್ನು ಪತ್ತೆ ಹಚ್ಚಿ ನೀರಿನಿಂದ ಹೊರತೆಗೆಯಲಾಗಿದ್ದು, ಅದರಲ್ಲಿ ದೆಹಲಿ ಮೂಲದ ತಾಯಿಯೊಬ್ಬಳು ತನ್ನ ಮಗುವನ್ನು ಎದೆಗಪ್ಪಿಕೊಂಡೇ ಇರುವ ಶವ ಕಂಡ ರಕ್ಷಣಾ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ. ಒಂದೇ ಲೈಫ್ ಜಾಕೆಟ್ನಲ್ಲಿ ತಾಯಿ–ಮಗು ಶವವಾಗಿ ಇರುವ ಈ ದೃಶ್ಯ ಸಾವಿನ ಕ್ಷಣದಲ್ಲೂ ತಾಯಿಯ ಪ್ರೀತಿ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ.
ಖುಷಿ ಖುಷಿಯಿಂದ ಬೋಟ್ ಏರಿದ ಎಲ್ಲರೂ ಸಂಭ್ರಮದಿಂದ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಎಂಜಾಯ್ ಮಾಡುತ್ತಿರುವಾಗಲೇ ಜಲಗಂಡಾಂತರ ಶುರುವಾಗಿ ನೌಕೆ ಮಗುಚಿ ಬಿದ್ದಿದೆ. ಈ ವೇಳೆ ಆ ತಾಯಿ ಲೈಫ್ ಜಾಕೆಟ್ ಧರಿಸಿದ್ದರು. ಆದರೆ ನೀರಿನ ಭೋರ್ಗರೆತ ಮತ್ತು ಆಳದ ಮುಂದೆ ಹೋರಾಡುವುದು ಅಸಾಧ್ಯವಾಗಿತ್ತು. ಈ ವೇಳೆ ಹೆದರುವ ಕಂದನನ್ನು ಎದೆಗೆ ಬಿಗಿದಪ್ಪಿಕೊಂಡ ತಾಯಿ ಹೆದರಬೇಡ ನಾನಿದ್ದಿನಿ ನಿನ್ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತೇನೆ ನನ್ನನ್ನು ಗಟ್ಟಿಯಾಗಿ ಹಿಡಿದುಕೋ ಎನ್ನುತ್ತ ಮಗನಿಗೆ ಧೈರ್ಯ ಹೇಳಿದ ಆ ತಾಯಿಯ ಗುಂಡಿಗೆಯನ್ನು ಮೆಚ್ಚಲೇ ಬೇಕು. ಈ ಆಳ ಸಮುದ್ರದಿಂದ ಕಂದನನ್ನು ಹೇಗೆ ಕಾಪಾಡಲಿ ಭಗವಂತ ನನ್ನ ಕಂದನನ್ನು ಕಾಪಾಡು ಎನ್ನುವ ತಾಯಿಯ ಕೂಗು ಪರಮಾತ್ಮನಿಗೆ ಕೇಳಿಸದೇ ಹೋಗಿದೆ. ತನ್ನ ಪ್ರಾಣಾಪಾಯದ ನಡುವೆಯೂ ಕಂದನ ಕಾಪಾಡುವ ತಾಯಿ ಹೋರಾಟ ವಿಫಲವಾಗಿದೆ.
ತನ್ನ ಉಸಿರು ನಿಲ್ಲುವ ಕೊನೆಯ ಕ್ಷಣದವರೆಗೂ ಎದೆಗಪ್ಪಿಕೊಂಡ ಕಂದನನ್ನು ಕೈ ಬಿಡದ ತಾಯಿ ವಿಧಿಯಾಟ ಮುಂದೆ ಸೋತು ಆಳದ ನೀರಿನಲ್ಲಿ ಉಸಿರು ನಿಲ್ಲಿಸಿದ್ದಾಳೆ. ಜಲಸಮಾಧಿಯಲ್ಲೂ ಸಡಿಲವಾಗದ ತಾಯಿಯ ಅಪ್ಪುಗೆ ಮಗುವನ್ನು ಎದೆಗೆ ಅಪ್ಪಿಕೊಂಡೇ ಪ್ರಾಣಬಿಟ್ಟ ತಾಯಿಯ ದೃಶ್ಯ ಕಟು ಹೃದಯವನ್ನು ಕಲಕಿದೆ.
ನಿರ್ಮಲಾ ಅರಳಿಕಟ್ಟಿ ನ್ಯೂಸ್ ಡೆಸ್ಕ್ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ .
PublicNext
01/05/2026 09:46 pm