"ಅತಿಯಾದ ವಿಶ್ವಾಸ ಪ್ರಾಣಕ್ಕೆ ಸಂಚಕಾರ" ಎಂಬ ಮಾತಿಗೆ ಸಾಕ್ಷಿಯಾದ ಭೀಕರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಬಂದ ಉರಗ ರಕ್ಷಕನೊಬ್ಬ, ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಹಾವಿನೊಂದಿಗೆ ಸರಸವಾಡಲು ಹೋಗಿ ಅಕಾಲಿಕ ಮರಣಕ್ಕೀಡಾಗಿದ್ದಾನೆ.
ಸ್ಥಳೀಯರ ಮನವಿಯ ಮೇರೆಗೆ ಕಟ್ಟಡವೊಂದಕ್ಕೆ ನುಗ್ಗಿದ್ದ ನಾಗರಹಾವನ್ನು ಹಿಡಿಯಲು ಈ ಉರಗ ರಕ್ಷಕ ಆಗಮಿಸಿದ್ದ. ಆರಂಭದಲ್ಲಿ ಹಾವನ್ನು ಯಶಸ್ವಿಯಾಗಿ ಹೊರಗೆ ತಂದ ಆತ, ಜನರೆದುರು ತನ್ನ ಸಾಹಸ ಪ್ರದರ್ಶಿಸಲು ಮುಂದಾದದ್ದೇ ದುರಂತಕ್ಕೆ ಕಾರಣವಾಯಿತು.
ಹಿಡಿದ ಹಾವನ್ನು ತಕ್ಷಣ ಚೀಲಕ್ಕೆ ಹಾಕುವ ಬದಲು ನೆಲದ ಮೇಲೆ ಬಿಟ್ಟು ಅದರ ತಲೆಯ ಮೇಲೆ ಕುಟ್ಟುತ್ತಾ ಪೀಡಿಸಲು ಶುರುಮಾಡಿದ. ಈ ವೇಳೆ ಸಿಟ್ಟಿಗೆದ್ದ ಹಾವು ಆತನ ಕಾಲಿಗೆ ಕಚ್ಚಿತು. ಆಘಾತಕಾರಿ ವಿಚಾರವೆಂದರೆ, ಕಚ್ಚಿಸಿಕೊಂಡ ನಂತರವೂ ಆತ ಎಚ್ಚೆತ್ತುಕೊಳ್ಳದೆ, "ಕಚ್ಚಲಿ ಬಿಡು" (ಹಾಂ ತೋ ಕಾಟ್) ಎಂಬಂತೆ ಉಡಾಫೆಯಾಗಿ ವರ್ತಿಸಿದ್ದಾನೆ. ಜನರೆದುರು ಹೀರೋ ಆಗಲು ಹೋದ ಆತ, ಮತ್ತೆ ಹಾವನ್ನು ಹಿಡಿದು ಪ್ರಚೋದಿಸಲು ಪ್ರಾರಂಭಿಸಿದಾಗ ಹಾವು ಎರಡನೇ ಬಾರಿ ಆತನ ಬೆರಳಿಗೆ ಕಚ್ಚಿತು.
ಬೆರಳಿಗೆ ಕಚ್ಚಿಸಿಕೊಂಡ ನಂತರ ಆತ ಮಾಡಿದ ಮತ್ತೊಂದು ದೊಡ್ಡ ತಪ್ಪು ಎಂದರೆ, ಗಾಯದಿಂದ ರಕ್ತವನ್ನು ಬಾಯಿಯಿಂದ ಹೀರಲು ಪ್ರಯತ್ನಿಸಿದ್ದು. ವೈದ್ಯಕೀಯ ತಜ್ಞರ ಪ್ರಕಾರ, ಹೀಗೆ ಮಾಡುವುದರಿಂದ ವಿಷವು ದೇಹದಲ್ಲಿ ಮತ್ತಷ್ಟು ವೇಗವಾಗಿ ಹರಡುತ್ತದೆ.
"ಇವನು ಅಪಾಯದ ಜೊತೆ ಆಟವಾಡುತ್ತಿದ್ದಾನೆ" ಎಂದು ಸ್ಥಳದಲ್ಲಿದ್ದವರು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತದೆ. ದುರಂತವೆಂದರೆ ಅವರು ಹೇಳಿದ ಮಾತು ಕೆಲವೇ ನಿಮಿಷಗಳಲ್ಲಿ ನಿಜವಾಯಿತು.
ವಿಷದ ತೀವ್ರತೆ ಹೆಚ್ಚಾದಂತೆ ಹಾವಾಡಿಗನ ಆರೋಗ್ಯ ಕ್ಷೀಣಿಸತೊಡಗಿತು. ಕೊನೆಗೆ ಹಾವನ್ನು ಡಬ್ಬಿಯಲ್ಲಿ ತುಂಬಿಸುವ ಹೊತ್ತಿಗೆ ಆತ ಕುಸಿದು ಬಿದ್ದು, ತೀವ್ರ ವೇದನೆಯಿಂದ ಸಾವನ್ನಪ್ಪಿದ್ದಾನೆ. ಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದ್ದರೂ, ಒಬ್ಬ ವ್ಯಕ್ತಿಯ ಅನಗತ್ಯ ಹಠ ಮತ್ತು ಅಸಡ್ಡೆ ಒಂದು ಜೀವವನ್ನು ಬಲಿ ತೆಗೆದುಕೊಂಡಿದೆ.
ಈ ವಿಡಿಯೋ ವನ್ಯಜೀವಿಗಳ ಬಗ್ಗೆ ನಮಗಿರಬೇಕಾದ ಎಚ್ಚರಿಕೆಯನ್ನು ನೆನಪಿಸುತ್ತದೆ. ಯಾವುದೇ ವಿಷಕಾರಿ ಪ್ರಾಣಿಯನ್ನು ಹಿಡಿಯುವಾಗ ಪ್ರೋಟೋಕಾಲ್ಗಳನ್ನು ಅನುಸರಿಸುವುದು ಕಡ್ಡಾಯ. ಪ್ರಾಣಿಗಳೊಂದಿಗೆ 'ಪ್ರದರ್ಶನ' ನೀಡಲು ಹೋಗುವುದು ಸಾವಿಗೆ ಆಹ್ವಾನ ನೀಡಿದಂತೆ.
ಹಾವು ಕಚ್ಚಿದ ತಕ್ಷಣ ಯಾವುದೇ ನಾಟಿ ಮದ್ದು ಅಥವಾ ರಕ್ತ ಹೀರಲು ಪ್ರಯತ್ನಿಸದೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಾಗುವುದು ಜೀವ ಉಳಿಸಿಕೊಳ್ಳಲು ಇರುವ ಏಕೈಕ ದಾರಿ.
PublicNext
02/05/2026 12:15 pm