ಹುಬ್ಬಳ್ಳಿ: ರಾಜ್ಯ ಸರ್ಕಾರ ಕಾವೇರಿ ತಂತ್ರಾಂಶ ಮೂಲಕ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಜಾರಿಗೆ ಮುಂದಾಗಿದ್ದು, ಇದರಿಂದ ಸಾರ್ವಜನಿಕ ಆಸ್ತಿ ದಾಖಲಾತಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ಡಿಜಿ ಲಾಕರ್'ನಲ್ಲಿ ಸೇವ್ ಆಗುವುದರಿಂದ ಆಸ್ತಿ ಖರೀದಿದಾರರಿಗೆ ನಿಖರ ದಾಖಲೆಗಳು ಸಿಗುವುದಿಲ್ಲ. ಈ ಯೋಜನೆಯಿಂದ ಸಾರ್ವಜನಿಕರಿಗೂ ಹಾಗೂ ದಸ್ತು ಬರಹಗಾರರಿಗೂ ತೀವ್ರ ತೊಂದರೆ ಆಗಲಿದ್ದು, ಕೂಡಲೇ ಸರ್ಕಾರ ಪೇಪರ್ ಲೇಸ್ ಜೊತೆಗೆ ಹಿಂದಿನ ವ್ಯವಸ್ಥೆಯನ್ನು ಮುಂದುವರೆಸುವಂತೆ ಧಾರವಾಡ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರ ಟ್ರಸ್ಟ್ ಜಿಲ್ಲಾಧ್ಯಕ್ಷ ಶಾಂತರಾಜ ಪೋಳ ಒತ್ತಾಯಿಸಿದ್ದಾರೆ.
ಮಾಧ್ಯಮದಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಆಸ್ತಿ ಖರೀದಿ, ಮಾರಾಟ ಸೇರಿದಂತೆ ಎಲ್ಲ ನೋಂದಣಿ ಕಾರ್ಯಗಳು ಪತ್ರ ವ್ಯವಹಾರದ ಮೂಲದ ನೋಂದಣಿ ಕಾರ್ಯ ನಡೆಯುತ್ತಿತ್ತು, ಆದರೆ ಇದೀಗ ಸರ್ಕಾರ ಕಾವೇರಿ ತಂತ್ರಾಂಶದ ಮೂಲಕ ಪೇಪರ್ ಲೇಸ್ ಮಾಡುವ ಮೂಲಕ ಭೂಮಾಫಿಯಾ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಂತೆ ಆಗುತ್ತಿದೆ. ಪೇಪರ್ ಲೇಸ್ ನೋಂದಣಿ ಕಾರ್ಯದಿಂದ ಯಾರ ಆಸ್ತಿ, ಯಾರು ಖರೀದಿ ಮಾಡಿದ್ದಾರೆ? ಯಾರು ಮಾರಾಟ ಮಾಡಿದ್ದಾರೆ? ಎಂಬುದೇ ಗೊತ್ತಾಗುವುದಿಲ್ಲ. ಅಲ್ಲದೇ ನೋಂದಣಿ ಕಾರ್ಯಕ್ಕಾಗಿ ಎಲ್ಲರೂ ಶಿಕ್ಷಣ ಪಡೆದವರೇ ಆಗುತ್ತಾರೆ ಎನ್ನುವುದು ಏನಿಲ್ಲ, ಅನಕ್ಷರಸ್ಥರು ಕೂಡಾ ನೋಂದಣಿ ಕಾರ್ಯಕ್ಕೆ ಬರುತ್ತಾರೆ ಅವರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಇದು ಅಷ್ಟೇ ಅಲ್ಲದೇ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಸಹ ತೀವ್ರ ತೊಂದರೆ ಆಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಈ ಪೇಪರ್ ಲೇಸ್ ಡಿಜಿಟಲ್ ಕಾರ್ಯವನ್ನು ಮೊದಲ ಬಾರಿಗೆ ಚಾಮರಾಜನಗರದಲ್ಲಿ ಜಾರಿಗೆ ತಂದು ಯಶಸ್ವಿ ಎಂದು ತೋರಿಸಿದ್ದಾರೆ. ಆದರೆ ಇದಕ್ಕೆ ಅನೇಕ ಸಮಸ್ಯೆ ಸಮಸ್ಯೆಗಳು ಎದುರಾಗುತ್ತಿವೆ. ಅನ್ಯ ರಾಜ್ಯಗಳಲ್ಲಿ ಪೇಪರ್ ಲೇಸ್ ಹಾಗೂ ಪೇಪರ್ ಸಹಿತ ನೋಂದಣಿ ಕಾರ್ಯ ಜಾರಿಯಲ್ಲಿದ್ದು ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಜಾರಿ ಮಾಡಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಇಲ್ಲದಿದ್ದಲ್ಲಿ ಕೇವಲ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಕಾರ್ಯ ಜಾರಿ ಮಾಡಿದಲ್ಲಿ ರಾಜ್ಯದಲ್ಲಿರುವ ಸಾವಿರಾರು ದಸ್ತು ಬರಹಗಾರರು ನಿರುದ್ಯೋಗಿಗಳಾಗಬೇಕಾಗುತ್ತದೆ. ಕಾರಣ ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರವನ್ನು ವಾಪಾಸ್ ಪಡೆಯಬೇಕು. ತದನಂತರ ಈ ಹಿಂದಿನಂತೆ ಇದ್ದ ವ್ಯವಸ್ಥೆಯ ಜೊತೆಗೆ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಜಾರಿ ಮಾಡಿದಲ್ಲಿ ನಮ್ಮ ಅಭ್ಯಂತರವಿಲ್ಲ ಎಂದರು.
ಈ ನಿರ್ಧಾರಕ್ಕೆ ಸರ್ಕಾರ ಬರದೇ ಇದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಈ ಕುರಿತು ರಾಜ್ಯದ ಎಲ್ಲ ದಸ್ತುಬರಹಗಾರರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ದಪಡಿಸಲಾಗುವುದು. ಇದಕ್ಕೆ ಸರ್ಕಾರ ಆಸ್ಪದ ಕೊಡದೇ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/05/2026 03:06 pm