ಶಿವಮೊಗ್ಗ : ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್(ಸ್ಪಾ)ಗಳನ್ನು ಶಾಶ್ವತವಾಗಿ ಮುಚ್ಚಿಸಬೇಕು. ಹಾಗೆಯೇ ಈ ದಂಧೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮುಖಂಡರ ನಿಯೋಗ ಮಂಗಳವಾರ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದಲ್ಲಿ ಮಸಾಜ್ ಪಾರ್ಲರ್ಗಳು ಎಲ್ಲೆಂದರಲ್ಲೇ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಇವುಗಳಿಗೆ ಯಾವುದೇ ರೀತಿಯ ಕಡಿವಾಣ ಇಲ್ಲ. ಇಲ್ಲಿ ಅಕ್ರಮ ದಂಧೆಗಳು ನಡೆಯುತ್ತಿವೆ. ಅಮಾಯಕ ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಈಗಾಗಲೇ ಸಾಕಷ್ಟು ದೂರುಗಳನ್ನು ಸಲ್ಲಿಸಿದರೂ ಕೂಡ ಕಡಿವಾಣ ಬಿದ್ದಿಲ್ಲ.
ಈ ಮಸಾಜ್ ಪಾರ್ಲರ್ಗಳು, ಅಕ್ರಮವಾಗಿ ನಡೆಯುತ್ತಿರುವುದರ ಹಿಂದೆ ಕೆಲವು ಅಧಿಕಾರಿಗಳ ಶಾಮೀಲು ಇದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಯುವಕರನ್ನು ಮತ್ತು ಯುವತಿಯರನ್ನು ಆಕರ್ಷಿಸುತ್ತಿರುವ ಈ ಮಸಾಜ್ ಪಾರ್ಲರ್ಗಳ ಮಾಲೀಕರುಗಳು ದಿನಕ್ಕೊಂದು ರಿಯಾಯಿತಿ ಆಫರ್ ನೀಡಿ, ಅಮಾಯಕ ಯುವಕ-ಯುವತಿಯರನ್ನು ಅಕ್ರಮ ದಂಧೆಗೆ ಬಲಿಕೊಡುತ್ತಿದ್ದಾರೆ. ಯುವ ಉದ್ಯೋಗಿಗಳಿಂದ ಸಾವಿರಾರು ರೂ. ಹಣ ಕಿತ್ತುಕೊಂಡು ವಂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಸಾಜ್ ಪಾರ್ಲರ್ಗಳನ್ನು ಶಾಶ್ವತವಾಗಿ ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
Kshetra Samachara
05/05/2026 04:40 pm
LOADING...