ಶಿವಮೊಗ್ಗ : ಟ್ರಾಫಿಕ್ ಪೊಲೀಸರು ಆಪರೇಷನ್ ಪುಟ್ಪಾತ್ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮಲ್ಲಿಕಾರ್ಜುನ ಟಾಕೀಸ್ ರಸ್ತೆಯಲ್ಲಿ ಮಂಡಕ್ಕಿ ಅಂಗಡಿಗಳ ತೆರವಿಗೆ ಸೂಚಿಸಿದ್ದ ಪೊಲೀಸರು ಆನಂತರ ಆಲ್ಕೋಳ, ಗಾಡಿಕೊಪ್ಪ ಸರ್ಕಲ್ಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಇದೀಗ ಗಾರ್ಡನ್ ಏರಿಯಾ ಭಾಗದಲ್ಲಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.
ಗಾರ್ಡನ್ ಏರಿಯಾದ 1ನೇ ಕ್ರಾಸ್, 2ನೇ ಕ್ರಾಸ್ ಹಾಗೂ 3ನೇ ಕ್ರಾಸ್ ರಸ್ತೆಗಳಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಜನರು ಓಡಾಟಕ್ಕೆ ಕಿರಿಕಿರಿಯಾಗುವಂತೆ ಪುಟ್ಪಾತ್ ಮೇಲೆ ವ್ಯವಹಾರಸ್ಥರು ನಾನಾ ಸಾಮಗ್ರಿಗಳನ್ನು ಇಟ್ಟಿದ್ದನ್ನ ತೆರವುಗೊಳಿಸಿದ ಪೊಲೀಸರು, ಮತ್ತೆ ಅದೇ ರೀತಿಯಲ್ಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಸಿಟಿಯಲ್ಲಿ ರಸ್ತೆ ಎಂಬುದು ಒತ್ತುವರಿ ಜಾಗವಾಗಿದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಗಾರ್ಡನ್ ಏರಿಯಾದಲ್ಲಿಯೂ ಸಹ ಸ್ಥಳೀಯ ವ್ಯಾಪಾರಿಗಳು ಕಬ್ಬಿಣದ ವಸ್ತುಗಳು, ಬೃಹತ್ ಜಾಹೀರಾತು ಫಲಕಗಳು ಮತ್ತು ತಮ್ಮ ಅಂಗಡಿಗೆ ಸೇರಿದ ಇತರೆ ಸಾಮಗ್ರಿಗಳನ್ನು ಅನಧಿಕೃತವಾಗಿ ಇರಿಸಿಕೊಂಡಿದ್ದರು.
ಇದರಿಂದಾಗಿ ದಿನನಿತ್ಯ ಜನ ಪುಟ್ ಪಾತ್ ಬಿಟ್ಟು ರಸ್ತೆಯಲ್ಲೇ ನಡೆಯಬೇಕಾದ ಅನಿವಾರ್ಯತೆ ಇತ್ತು. ಇದೀಗ ಟ್ರಾಫಿಕ್ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯ ಮೇಲಿದ್ದ ವಸ್ತುಗಳನ್ನು ತೆರವುಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ಅಂಗಡಿ ಮಾಲೀಕರಿಗೆ ಹಾಗೂ ವ್ಯಾಪಾರಿಗಳಿಗೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದ್ದಾರೆ.
ವಾಹನ ಸವಾರರ ಮತ್ತು ಪಾದಚಾರಿಗಳ ಸುಗಮ ಓಡಾಟಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ಎಚ್ಚರವಹಿಸಬೇಕು. ಮುಂದಿನ ದಿನಗಳಲ್ಲಿ ಮತ್ತೆ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು,
ಅಲ್ಲದೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಬೇಕು ಎಂದು ಪೊಲೀಸರು ಖಡಕ್ ಸೂಚನೆ ನೀಡಿದರು.
PublicNext
06/05/2026 11:23 am
LOADING...