ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಸಚಿವ ಸ್ಥಾನ ನೀಡಲು ಅಶೋಕ್ ಬೇಳೂರು ಆಗ್ರಹ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಬೇಳೂರು ಒತ್ತಾಯಿಸಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಅವರು, ಗೋಪಾಲಕೃಷ್ಣ ಬೇಳೂರು ಅವರು ಪಕ್ಷದ ಸಂಘಟನೆ, ಸಾರ್ವಜನಿಕ ಸೇವೆ ಹಾಗೂ ಸಾಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಅವರ ಸತತ ಪರಿಶ್ರಮ ಮತ್ತು ಜನಪರ ಕಾಳಜಿಯನ್ನು ಗಮನಿಸಿದರೆ, ಅವರು ಸಚಿವ ಸ್ಥಾನವನ್ನು ಅಲಂಕರಿಸಲು ಸಂಪೂರ್ಣ ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಲೆನಾಡು ಭಾಗದ ಜನರ ದೀರ್ಘಕಾಲದ ಆಶೋತ್ತರಗಳು ಹಾಗೂ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಸಚಿವ ಸಂಪುಟದಲ್ಲಿ ಈ ವಲಯಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡುವುದು ಅತ್ಯಗತ್ಯವಾಗಿದೆ ಎಂದು ಅಶೋಕ್ ಬೇಳೂರು ಅಭಿಪ್ರಾಯಪಟ್ಟಿದ್ದಾರೆ. ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆ ಸೇರಿದಂತೆ ಇಡೀ ಮಲೆನಾಡು ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ.
ಇದು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಹೆಚ್ಚಿನ ಬಲ ತುಂಬಲಿದೆ. ಆದ್ದರಿಂದ, ಹೈಕಮಾಂಡ್ ಸಚಿವ ಸಂಪುಟ ರಚಿಸುವಾಗ ಕಾರ್ಯಕರ್ತರ ನಿರೀಕ್ಷೆ ಹಾಗೂ ಜನರ ಆಶಯವನ್ನು ಪರಿಗಣಿಸಿ ಮಲೆನಾಡು ಭಾಗಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Kshetra Samachara
30/05/2026 09:09 pm
LOADING...