ಭಟ್ಕಳ: ಮುರ್ಡೇಶ್ವರದಲ್ಲಿ ತಾಯಿ-ತಂದೆಯರೊಂದಿಗೆ ಮಲಗಿದ್ದ ಪುಟ್ಟ ಮಗುವೊಂದು ನಾಪತ್ತೆಯಾಗಿದ್ದು, ಇದೊಂದು ಅಪಹರಣ ಕೃತ್ಯವಿರಬಹುದು ಎಂದು ಬಲವಾದ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಶ್ರೀಮತಿ ಶೋಭಾ ಕುಮಾರಿ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಶೋಭಾ ಕುಮಾರಿ ಮತ್ತು ಅವರ ಕುಟುಂಬ ಗುಜರಿ ವಸ್ತುಗಳನ್ನು ಸಂಗ್ರಹಿಸಿ ಜೀವನ ನಡೆಸುತ್ತಿದ್ದು, ಕೆಲಸದ ನಿಮಿತ್ತ ಊರಿಂದ ಊರಿಗೆ ಸಂಚರಿಸುತ್ತಾರೆ.
ಸುಮಾರು ಎರಡು ವಾರಗಳ ಹಿಂದೆ ಮುರ್ಡೇಶ್ವರಕ್ಕೆ ಬಂದಿದ್ದ ಈ ಕುಟುಂಬವು ರೈಲು ನಿಲ್ದಾಣದ ಸಮೀಪದ ರಸ್ತೆಯ ಬದಿಯಲ್ಲಿರುವ ಗೂಡಂಗಡಿಯ ಮುಂದೆ ತಾತ್ಕಾಲಿಕವಾಗಿ ತಂಗಿತ್ತು.
ಘಟನೆ ನಡೆದ ರಾತ್ರಿ, ಶೋಭಾ ಕುಮಾರಿ, ಅವರ ಪತಿ ಹಾಗೂ ಮಗು ಊಟ ಮುಗಿಸಿ ಅಲ್ಲೇ ಮಲಗಿದ್ದರು. ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಎಚ್ಚರವಾದಾಗ, ಮಗು ತಮ್ಮ ಮಧ್ಯದಲ್ಲೇ ಮಲಗಿರುವುದನ್ನು ಅವರು ಗಮನಿಸಿದ್ದಾರೆ. ಆದರೆ, ಬೆಳಿಗ್ಗೆ ಸುಮಾರು 6 ಗಂಟೆಗೆ ಮತ್ತೆ ಎಚ್ಚರವಾದಾಗ, ಮಗು ಕಾಣೆಯಾಗಿರುವುದು ತಿಳಿದುಬಂದಿದೆ.
ತಕ್ಷಣ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ತಾವು ಗಾಢ ನಿದ್ರೆಯಲ್ಲಿದ್ದಾಗ ಅಪರಿಚಿತರು ಮಗುವನ್ನು ಅಪಹರಿಸಿರಬಹುದು ಎಂದು ಶೋಭಾ ಕುಮಾರಿ ಶಂಕಿಸಿದ್ದಾರೆ.
ಶೋಭಾ ಕುಮಾರಿ ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಪೊಲೀಸರು, ನಾಪತ್ತೆಯಾದ ಮಗುವಿನ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Kshetra Samachara
30/05/2026 10:26 pm
LOADING...