ಭಟ್ಕಳ: ಮುರಿನಕಟ್ಟೆ ವಿವಾದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ನಡೆ ಖಂಡನೀಯವಾಗಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೆಲಸ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.
ಅವರು ಶುಕ್ರವಾರ ಮುರಿನಕಟ್ಟೆ ಮರು ನಿರ್ಮಾಣಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಯೋಧ್ಯೆ ಬಾಬರಿ ಮಸೀದಿಯನ್ನು ಒಡೆದು ರಾಮ ಮಂದಿರ ನಿರ್ಮಾಣಕ್ಕೆ ತೆರಳಿ 21 ದಿನ ತಾನು ಅಲ್ಲಿ ಕರಸೇವೆ ಮಾಡಿದ್ದೇನೆ.
ತನಗೆ ಒಡೆಯುವುದು ಗೊತ್ತು ಕಟ್ಟುವುದು ಗೊತ್ತು ಎಂದು ಎಚ್ಚರಿಸಿದರು. ಭಟ್ಕಳದಲ್ಲಿ ಅನಾದಿಕಾಲದಿಂದಲೂ ಆರಾಧನೆ ನಡೆಯುತ್ತಿದ್ದ ಮುರಿನಕಟ್ಟೆ ಧ್ವಂಸಗೊಳಿಸಿರುವ ಘಟನೆ ನೋವುಂಟುಮಾಡಿದೆ.
ಈ ವಿಚಾರ ತಿಳಿದ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ. ಅವರನ್ನು ಬರೀ ಬಂಧಿಸುವುದು ಮಾತ್ರವಲ್ಲ ಗಡಿಪಾರು ಮಾಡುವಂತೆ ಸೂಚಿಸಿದ್ದೇನೆ. ಹಿಂದೂ ಸಮಾಜದ ಭಾವನೆಗಳಿಗೆ ಗೌರವ ನೀಡುವ ಬದಲು ಸರ್ಕಾರ ಮತ್ತು ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ.
ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿಯುತವಾಗಿದ್ದ ಪ್ರದೇಶದಲ್ಲಿ ಕೆಲವರು ದ್ವೇಷದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಸುನೀಲ್ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ್, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್ ಇತರರು ಇದ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಧರ್ಮದ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿಲ್ಲ. ಒಂದು ಸಮುದಾಯದ ತುಷ್ಟೀಕರಣ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಇದರಿಂದ ಸಮಾಜದಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ನಡೆದ ಘಟನೆಗಳು ಇದಕ್ಕೆ ಉದಾಹರಣೆಯಾಗಿ ಉಲ್ಲೇಖವಾಗುತ್ತಿವೆ.
ಗಣಪತಿ ಮೆರವಣಿಗೆಗಳ ಮೇಲೆ ನಿರ್ಬಂಧ ಅಥವಾ ಅಡ್ಡಿಪಡಿಸುವ ಪ್ರಯತ್ನ ನಡೆದಾಗ, ಜನರು ಇನ್ನಷ್ಟು ಸಂಘಟಿತರಾಗಿ ದೊಡ್ಡ ಮಟ್ಟದಲ್ಲಿ ಮೆರವಣಿಗೆಗಳನ್ನು ನಡೆಸಿದ್ದಾರೆ. ಒಂದು ಗಣೇಶನ ಮೆರವಣಿಗೆ ತಡೆಯಲು ಯತ್ನಿಸಿದರೆ, ನಾವು ನೂರು ಗಣೇಶರ ಮೆರವಣಿಗೆ ಮಾಡುತ್ತೇವೆ ಎಂಬ ಮನೋಭಾವದಿಂದ ಜನರು ಪ್ರತಿಕ್ರಿಯಿಸಿದ್ದಾರೆ.
ಪದೇ ಪದೇ ಶಾಂತಿ, ಶಾಂತಿ ಎಂದು ಹೇಳುತ್ತಾ ಇದ್ದರೆ ನಮ್ಮ ಹಕ್ಕುಗಳೇ ಕಳೆದುಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೇವಲ ಶಾಂತಿಯ ಮಾತಲ್ಲ, ನ್ಯಾಯಕ್ಕಾಗಿ ಹೋರಾಟ ನಡೆಯಬೇಕು. ಭಾರತ ಮತ್ತು ಸನಾತನ ಧರ್ಮದ ರಕ್ಷಣೆಗೆ ಸಮಾಜ ಒಗ್ಗಟ್ಟಾಗಬೇಕಾಗಿದೆ. ಧರ್ಮ ಮತ್ತು ಸಂಸ್ಕೃತಿಗೆ ಧಕ್ಕೆ ಬಂದರೆ ರಾಜ್ಯದ ಶಾಂತಿ ಮತ್ತು ವ್ಯವಸ್ಥೆಯೇ ಹದಗೆಡುವ ಸಾಧ್ಯತೆ ಇದೆ.
ಆದ್ದರಿಂದ ಎಲ್ಲ ಹಿಂದೂಗಳು ಒಗ್ಗಟ್ಟಾಗಿ ನಿಲ್ಲಬೇಕು, ಸಮಾಜದ ಹಿತಕ್ಕಾಗಿ ಒಂದಾಗಿ ಕಾರ್ಯನಿರ್ವಹಿಸಬೇಕು. ಮುರಿನಕಟ್ಟೆ ನಿರ್ಮಾಣಕ್ಕೆ ಒಂದು ತಿಂಗಳು ಸಮಯ ನೀಡುತ್ತೇನೆ. ಅಷ್ಟರಲ್ಲಿ ಆಡಳಿತ ಅದನ್ನು ಕಟ್ಟಿ ಮುಗಿಸಬೇಕು ಇಲ್ಲವಾದರೆ ತಾನೇ ನಿಂತು ಕಟ್ಟಿಸುತ್ತೇನೆ ಎಂದರು.
ಕರ್ನಾಟಕದಲ್ಲೂ 10 ಲಕ್ಷ ಬಾಂಗ್ಲಾದೇಶಿಗರು
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಬಾಂಗ್ಲಾದೇಶಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಕರ್ನಾಟಕದಲ್ಲೂ 10 ಲಕ್ಷ ಬಾಂಗ್ಲಾ ದೇಶೀಯರು ಇದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದರೆ ಇವರನ್ನೆಲ್ಲಾ ಗಡಿಪಾರು ಮಾಡಬಹುದು.
ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಬಾಂಗ್ಲಾ ವಲಸಿಗರಿಗೆ ಮಮತಾ ದೇವಿ ರೇಷನ್ ಕಾರ್ಡ್, ಪಾಸ್ಪೋರ್ಟ್ ನೀಡುತ್ತಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ಅವರನ್ನು ಪುನಃ ಬಾಂಗ್ಲಾ ದೇಶಕ್ಕೆ ಗಡಿಪಾರು ಮಾಡಲಾಗುತ್ತಿದೆ ಎಂದರು
ಆರಂಭದಲ್ಲಿ ಭಟ್ಕಳ ರಿಕ್ಷಾ ನಿಲ್ದಾಣ ಸಮಿತಿಯ ಗಣೇಶೋತ್ಸವ ನಡೆಯುವ ಸ್ಥಳದಿಂದ ಬೃಹತ್ ಪ್ರತಿಭಟನೆ ಆರಂಭವಾಗಿ ಪ್ರವಾಸಿ ಮಂದಿರದ ಮೂಲಕ ತಾಲೂಕು ಆಡಳಿತ ಸೌಧದ ವರೆಗೆ ಸಾಗಿತು.
ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮುರಿನಕಟ್ಟೆ ಮರುನಿರ್ಮಾಣದ ಕುರಿತು ಘೋಷಣೆ ಕೂಗಿದರು.
ಸಂಸದ ಕಾಗೇರಿ ಮಾಜಿ ಶಾಸಕ ಸುನೀಲ್ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ್, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್, ಮುರಿನಕಟ್ಟೆ ಮರುನಿರ್ಮಾಣಕ್ಕಾಗಿ ಆಗ್ರಹಿಸಿ ಮಾತನಾಡಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ್, ಸುನೀಲ್ ಹೆಗಡೆ, ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಇತರರು ಇದ್ದರು.
Kshetra Samachara
29/05/2026 10:13 pm