ಭಟ್ಕಳ: ನಗರದ ಮುರಿನಕಟ್ಟೆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ಗೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಆರೋಪದ ಮೇಲೆ, 22 ಮಂದಿ ಹೆಸರಿತ ಆರೋಪಿಗಳು ಸೇರಿದಂತೆ ಹಲವರ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 24ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ರಾಷ್ಟ್ರೀಯ ಹೆದ್ದಾರಿ-66ರ ಮುರಿನಕಟ್ಟೆ ಬಳಿ ಈ ಘಟನೆ ನಡೆದಿದ್ದು, ಭಟ್ಕಳ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಮುರಿನಕಟ್ಟೆ ಬಳಿ ಸುಮಾರು 50ಕ್ಕೂ ಹೆಚ್ಚು ಮಂದಿ ಅಕ್ರಮವಾಗಿ ಗುಂಪು ಸೇರಿದ್ದರು. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ಅವರೊಂದಿಗೆ ಕೆಲವರು ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಕರ್ತವ್ಯ ನಿರತ ಇನ್ಸ್ಪೆಕ್ಟರ್ ಅವರನ್ನು ತಳ್ಳಿ-ದೂಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಗಲಾಟೆಯಲ್ಲಿ ಇನ್ಸ್ಪೆಕ್ಟರ್ ದಿವಾಕರ್ ಅವರ ಕಾಲಿಗೆ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ನಂತರ ಪೊಲೀಸರು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿದ್ದಾರೆ.
ಈ ಪ್ರಕರಣ ಸಂಬಂಧ ತೈಮೂರ್ ಗವಾಯಿ, ಸುಹೇಲ್ ಕದ್ದಾರಿ, ನಹೀಮ್ ಕಾಸಿಂಜಿ, ಸಲಾಮ್ ಚಾಮುಂಡಿ, ಅಬ್ದುಲ್ ಅನನ್, ಬಾಸಿದ್ ಮೌಲಿನ್, ಜುಲ್ಕಿಫ್ ಹಸನ್, ತಹಾ ರುಕ್ಕುದ್ದೀನ್, ಆರಿಫ್ ಜಬಾಲಿ, ಅಬ್ದುಲ್ ಅಲೀಮ್ ಜಬಾಲಿ, ಜಮ್ಮೇರ್, ಮರ್ವಾನ್ ಅಜೈಬ್, ನೌಫಿಲ್, ಅಯ್ಯನ್ ದಾಮುದಿ, ನಾಸಿರ್, ಜಾವೇದ್ ಮುಕ್ರಿ, ಫಈಝ್ ಮಜಾರ್, ಅರ್ಸಲಾನ್ ಮೋಟಿಯ, ಶಾರೀಮ್ ಹಸಿಮ್, ಮುಂತಾಜೀನ್, ಸಲಾಮ್, ಅಹಮದ್ ಪೇಶಮಾಮ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
26/05/2026 08:28 pm