ಬೆಂಗಳೂರು: ಗೃಹ ಬಳಕೆಯ 14.2 ಕೆ.ಜಿ. ಅಡುಗೆ ಅನಿಲ ಸಿಲಿಂಡರ್ ದರವನ್ನು 29 ರೂ. ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಇದೇನಾ ಅಚ್ಛೇದಿನ್ ಎಂದು ಪ್ರಶ್ನಿಸಿದ್ದಾರೆ.
ಕಳೆದ 3 ತಿಂಗಳಲ್ಲಿ 2ನೇ ಬಾರಿ ಶ್ರೀಸಾಮಾನ್ಯರು ಬಳಸುವ ಅಡುಗೆ ಅನಿಲ ದರ ಏರಿಕೆ ಮಾಡಲಾಗಿದ್ದು, ಸುಮಾರು 90 ರೂ. ಹೊರೆ ಬಿದ್ದಿದೆ. ಇದರಿಂದ ಬಡವರು, ಮಧ್ಯಮವರ್ಗದವರು ನಲುಗಿ ಹೋಗಿದ್ದಾರೆ. ಇದೆಲ್ಲವೂ ಕೇಂದ್ರ ಸರ್ಕಾರದ ದುರಾಡಳಿತದ ಫಲ ಎಂದು ಅವರು ಕಿಡಿ ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಕಾಲದಲ್ಲಿ 3-4 ರೂ. ದರ ಹೆಚ್ಚಳವಾದರೂ ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿಗರು ಈಗ ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ? ಈಗ ಇವರ ಬಡವರ ಪರ ಕಾಳಜಿ ಎಲ್ಲಿ ಹೋಯಿತು? ಎಂದು ಸಚಿವ ಈಶ್ವರ್ ಖಂಡ್ರೆ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.ವಾಣಿಜ್ಯ ಬಳಕೆಯ ಸಿಲಿಂಡರ್ ದರ 3,200 ರೂ. ದಾಟಿದ್ದು, ಹೊಟೆಲ್ ಗಳಲ್ಲಿ ಎಲ್ಲ ತಿಂಡಿ ತಿನಿಸುಗಳ ದರವೂ ಹೆಚ್ಚಳ ಆಗಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳದಿಂದ ಜೀವನಾವಶ್ಯಕ ವಸ್ತುಗಳ ದರವೂ ಗಗನಕ್ಕೆ ಏರಿದೆ. ಬಡವರು, ಮಧ್ಯಮವರ್ಗದವರ ಬದುಕು ದುಸ್ತರವಾಗುತ್ತಿದೆ. ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡಿರುವುದರಿಂದ ಜನ ಕೇಂದ್ರ ಸರ್ಕಾರದ ಈ ಹೊರೆ ಹೊರುವ ಶಕ್ತಿ ಪಡೆದಿದ್ದಾರೆ. ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಜನರೇ ಬೀದಿಗಿಳಿದು ಬುದ್ಧಿಕಲಿಸುವ ದಿನ ದೂರವಿಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
PublicNext
07/06/2026 05:12 pm
LOADING...