ಸಕಲೇಶಪುರ: ಅರಣ್ಯ ಸಂಪತ್ತಿನ ರಕ್ಷಣೆಗೆ ಬದ್ಧವಾಗಿರುವ ಅರಣ್ಯ ಇಲಾಖೆಯು ಖಚಿತ ಮಾಹಿತಿ ಆಧರಿಸಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹವಳಿಗೆ ಬಿಲ್ಲೆಟ್ಸ್ಗಳ ಒಂದು ಲೋಡ್ ಹಾಗೂ ವಾಹನವನ್ನು ವಶಪಡಿಸಿಕೊಂಡಿದೆ.
ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಅರ್ಜುನ್, ಮಂಜುನಾಥ್, ಕುಮಾರ್ ಹಾಗೂ ಉಮೇಶ್ ಅವರನ್ನೊಳಗೊಂಡ ತಂಡ ತಾಲೂಕಿನ ಬೈಕೆರೆ ಗ್ರಾಮ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಸಿತು.
ಕಾರ್ಯಾಚರಣೆಯ ವೇಳೆ KA-19 AC-7767 ಸಂಖ್ಯೆಯ ಕಂಟೇನರ್ ಮಾದರಿಯ ವಾಹನದಲ್ಲಿ ಯಾವುದೇ ಇಲಾಖಾ ರಹದಾರಿ ಇಲ್ಲದೆ ಅಕ್ರಮವಾಗಿ ಸುಮಾರು 9.180 ಘನ ಮೀಟರ್ (m³) ಹವಳಿಗೆ ಬಿಲ್ಲೆಟ್ಸ್ ಸಾಗಾಟ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದರು. ತಕ್ಷಣವೇ ವಾಹನ ಹಾಗೂ ಅರಣ್ಯ ಉತ್ಪನ್ನವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಸಕಲೇಶಪುರ ವಲಯ ವ್ಯಾಪ್ತಿಯಲ್ಲಿ ಅರಣ್ಯ ಮೊಕದ್ದಮೆ ಸಂಖ್ಯೆ 8/2026-27 ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ವಾಹನದ ದಾಖಲೆಗಳನ್ನು ಪರಿಶೀಲಿಸಿದ ವೇಳೆ, ಸದರಿ ವಾಹನವು ಈ ಹಿಂದೆಯೂ ಅರಣ್ಯ ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. FOC ಸಂಖ್ಯೆ 59/2025-26 ಹಾಗೂ FOC ಸಂಖ್ಯೆ 10/2025-26 ಸೇರಿದಂತೆ ಎರಡು ಪ್ರತ್ಯೇಕ ಅರಣ್ಯ ಪ್ರಕರಣಗಳಲ್ಲಿ ಇದೇ ವಾಹನದ ವಿರುದ್ಧ ಮೊಕದ್ದಮೆ ದಾಖಲಾಗಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಸಂಪತ್ತಿನ ಅಕ್ರಮ ಸಾಗಾಟ ಮತ್ತು ಕಳ್ಳತನ ತಡೆಗೆ ಇಲಾಖೆ ನಿರಂತರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಅರಣ್ಯ ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Kshetra Samachara
11/06/2026 04:40 pm