ಬೆಂಗಳೂರು : ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಹಾಗೂ ಪಿ.ಸಿ. ಶೇಖರ್ ನಿರ್ದೇಶಿಸುತ್ತಿರುವ "ಮಹಾನ್" ಚಿತ್ರ ಆರಂಭದಿಂದಲೂ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸದಾ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಗೆಲ್ಲುವ ವಿಜಯ ರಾಘವೇಂದ್ರ ಈ ಚಿತ್ರದಲ್ಲಿ ರೈತನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸಂಪೂರ್ಣವಾಗಿ ರೈತರ ಬದುಕಿನ ಹಿನ್ನೆಲೆಯುಳ್ಳ ಅಪರೂಪದ ಕಥಾಹಂದರವಾಗಿದ್ದು, ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ.
ಇಂತಹ ವಿಶಿಷ್ಟ ಕಥೆಯುಳ್ಳ "ಮಹಾನ್" ಚಿತ್ರದಲ್ಲಿ ಕನ್ನಡ ಚಿತ್ರರಂಗದ ಘಟಾನುಘಟಿ ಹಾಗೂ ಅನುಭವಿ ಕಲಾವಿದರ ದಂಡೇ ಜತೆಯಾಗಿದೆ. ಡೈನಾಮಿಕ್ ಸ್ಟಾರ್ ದೇವರಾಜ್, ಶರತ್ ಲೋಹಿತಾಶ್ವ, ರಮೇಶ್ ಭಟ್, ಅವಿನಾಶ್, ರಂಗಾಯಣ ರಘು ಮತ್ತು ರಮೇಶ್ ಇಂದಿರಾ ಅವರಂತಹ ಅಪ್ರತಿಮ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರೆಲ್ಲರ ಅಭಿನಯ ನೋಡುಗರ ಮನಸ್ಸಿನಲ್ಲಿ ಸದಾ ಕಾಲ ಉಳಿಯುವಂತಿದ್ದು, ಇಂತಹ ದಿಗ್ಗಜರು ಒಂದೇ ಚಿತ್ರದಲ್ಲಿ ನಟಿಸಿರುವುದು ಇಡೀ ತಂಡಕ್ಕೆ ಹೆಮ್ಮೆಯ ವಿಷಯವಾಗಿದೆ.
ಇದೊಂದು ಬಹು ತಾರಾಗಣದ ಅದ್ಧೂರಿ ಸಿನಿಮಾವಾಗಿದ್ದು, ಚಿತ್ರದಲ್ಲಿ ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಮತ್ತು ಕಿರಣ್ ಶ್ರೀನಿವಾಸ್ ಕೂಡ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕಥೆ ಮತ್ತು ತಾರಾಬಳಗದಿಂದಲೇ ಸದ್ದು ಮಾಡುತ್ತಿರುವ "ಮಹಾನ್" ಸಿನಿಮಾ ಸ್ಯಾಂಡಲ್ವುಡ್ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ.
PublicNext
13/06/2026 12:19 pm