ಮೈಸೂರು: ನೆಸ್ಲೆ ಕಂಪನಿ ಕಾರ್ಮಿಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತನ ಕುಟುಂಬಕ್ಕೆ ಕಾರ್ಖಾನೆಯ ಗುತ್ತಿಗೆದಾರ 35 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದಾರೆ. ಆದರೆ, ಕಾರ್ಮಿಕ ಬರೆದಿಟ್ಟ ಡೆತ್ ನೋಟ್ನಲ್ಲಿ ತಮ್ಮ ಸಾವಿಗೆ ಕಾರಣರಾದವರು ಎಂದು ಉಲ್ಲೇಖಿಸಿರುವ ಮೂವರ ವಿರುದ್ಧ ಇದುವರೆಗೂ ಪ್ರಕರಣ ದಾಖಲಾಗಿಲ್ಲ, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತನ ಪತ್ನಿ ಪುಷ್ಪಾವತಿ ಅವರಿಗೆ ಪರಿಹಾರದ ಚೆಕ್ ವಿತರಿಸಿ, ಗುತ್ತಿಗೆದಾರರು ಸಾಂತ್ವನ ಹೇಳಿದ್ದಾರೆ. ಈ ಮೂಲಕ ಒಂದು ಹಂತದ ಪರಿಹಾರ ದೊರೆತಂತಾಗಿದೆ.
ಡೆತ್ ನೋಟ್ನಲ್ಲಿ ಆರೋಪ
ಆದರೆ, ಮೃತನ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೋಟ್ನಲ್ಲಿ ತನ್ನ ಸಾವಿಗೆ ಸಹೋದ್ಯೋಗಿಗಳಾದ ದಿವ್ಯಶ್ರೀ, ರಾಘವೇಂದ್ರ ಹಾಗೂ ದಿನೇಶ್ ಅವರ ಕಿರುಕುಳವೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಕುಮಾರಸ್ವಾಮಿ ಅವರು ನೇರವಾಗಿ ಇನ್ಸ್ಪೆಕ್ಟರ್ಗೆ ಮನವಿ ಮಾಡಿದ್ದರು.
ಅನುಮಾನಕ್ಕೆ ಕಾರಣವಾದ ವಿಳಂಬ
ಘಟನೆ ನಡೆದು 48 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಡೆತ್ ನೋಟ್ನಲ್ಲಿ ಹೆಸರಿಸಲಾದ ಮೂವರು ವ್ಯಕ್ತಿಗಳ ವಿರುದ್ಧ ಇದುವರೆಗೂ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿಲ್ಲ. ಇನ್ಸ್ಪೆಕ್ಟರ್ಗೆ ನೇರವಾಗಿ ಬರೆದ ಪತ್ರದಲ್ಲಿ ಆರೋಪಿಗಳ ಹೆಸರುಗಳಿದ್ದರೂ, ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆ ಮೀನಮೇಷ ಎಣಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗುತ್ತಿಗೆದಾರರು ಪರಿಹಾರ ನೀಡಿದ ಮಾತ್ರಕ್ಕೆ ಆರೋಪಿಗಳ ತಪ್ಪು ಇಲ್ಲವೆಂದು ಅರ್ಥವೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
PublicNext
13/06/2026 02:31 pm