ಹಡಗಲಿ: ದಾರಿಯಲ್ಲಿ ಸಿಕ್ಕಿದ್ದ ಬೆಲೆಬಾಳುವ ಮೊಬೈಲ್ ಅನ್ನು ಸುರಕ್ಷಿತವಾಗಿ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಹರಪನಹಳ್ಳಿ ಘಟಕದ ಚಾಲಕ ಮೀರ್ಸಾಬ್ ದೊಡ್ಡನಿ ಹಾಗೂ ನಿರ್ವಾಹಕ ಮರುಳಸಿದ್ದಪ್ಪ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಘಟನೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಹಡಗಲಿ ತಾಲೂಕಿನ ಹೊಳಲು ಗ್ರಾಮದ ಸುಭಾಸ್ಚಂದ್ರ ಅವರು ರಾತ್ರಿ ಸಮಯದಲ್ಲಿ ಹೊಳಲಿನಿಂದ ಗುತ್ತಲ ಪಟ್ಟಣಕ್ಕೆ ತೆರಳುತ್ತಿದ್ದಾಗ, ಆಕಸ್ಮಿಕವಾಗಿ ತಮ್ಮ ಬೆಲೆಬಾಳುವ ಮೊಬೈಲ್ ಅನ್ನು ಹಾವನೂರು ಕ್ರಾಸ್ ಬಳಿ ಜೇಬಿನಿಂದ ಬೀಳಿಸಿಕೊಂಡು ಹೋಗಿದ್ದರು. ಈ ವೇಳೆ, ಹರಪನಹಳ್ಳಿಯಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್ನ ಚಾಲಕ ಮೀರ್ಸಾಬ್ ದೊಡ್ಡನಿ ಅವರ ಸಮಯಪ್ರಜ್ಞೆಯಿಂದಾಗಿ ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಗಮನಿಸಿ, ತಕ್ಷಣ ಬ್ರೇಕ್ ಹಾಕಿ ಚಕ್ರದ ಅಡಿಗೆ ಸಿಲುಕುವುದನ್ನು ತಪ್ಪಿಸಿದರು. ಬಳಿಕ, ನಿರ್ವಾಹಕ ಮರುಳಸಿದ್ದಪ್ಪ ಅವರು ಮೊಬೈಲ್ ಅನ್ನು ತೆಗೆದುಕೊಂಡು, ಅದರ ಮೂಲ ಮಾಲೀಕ ಸುಭಾಸ್ಚಂದ್ರ ಅವರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದರು.
ಸಾರ್ವಜನಿಕರ ಮನಗೆದ್ದ ನಿಸ್ವಾರ್ಥ ಸೇವೆ
ನಿತ್ಯ ಮಂಗಳೂರಿಗೆ ಸಂಚರಿಸುವ ಈ ಬಸ್ನಲ್ಲಿ ಬಹುತೇಕ ರೋಗಿಗಳು ದೂರದ ಮಣಿಪಾಲ್ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳುತ್ತಾರೆ. ಚಾಲಕ ಮೀರ್ಸಾಬ್ ದೊಡ್ಡನಿ ಅವರು ವಾಹನವನ್ನು ಸುರಕ್ಷಿತವಾಗಿ ಚಲಾಯಿಸುವ ಮೂಲಕ ಸಾರ್ವಜನಿಕರ ಮನಸ್ಸು ಗೆದ್ದಿದ್ದರೆ, ನಿರ್ವಾಹಕ ಮರುಳಸಿದ್ದಪ್ಪ ಅವರು ರೋಗಿಗಳು, ಮಹಿಳೆಯರು ಹಾಗೂ ವಯೋವೃದ್ಧರಿಗೆ ಸೀಟು ವ್ಯವಸ್ಥೆ ಮಾಡಿಕೊಡುವುದರ ಜೊತೆಗೆ ಸಂಯಮದಿಂದ ವರ್ತಿಸುವ ಮೂಲಕ ಪ್ರಯಾಣಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ನಿಸ್ವಾರ್ಥ ಸೇವೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
PublicNext
16/06/2026 07:36 am