ಬೆಂಗಳೂರು: ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಅವರೊಂದಿಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರ ಮುಂಜಾನೆ ದೇವಸ್ಥಾನಕ್ಕೆ ತೆರಳಿದ ಅವರು, ಶ್ರೀ ವೆಂಕಟೇಶ್ವರ ಸ್ವಾಮಿಯ ದಿವ್ಯ ದರ್ಶನ ಪಡೆದರು.
ದೇವರಲ್ಲಿ ಅಪಾರ ಭಕ್ತಿ ಮತ್ತು ನಂಬಿಕೆ ಹೊಂದಿರುವ ಡಿ. ಕೆ. ಶಿವಕುಮಾರ್, ತಿರುಪತಿಯಲ್ಲಿ ದರ್ಶನ ಪಡೆದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಧರ್ಮಪತ್ನಿ ಉಷಾ ಅವರೊಂದಿಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ, ದೇವರ ದಿವ್ಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ಜಗದೋದ್ಧಾರಕ ಶ್ರೀನಿವಾಸನ ಅನುಗ್ರಹವೂ ಪ್ರತಿಯೊಬ್ಬರ ಮೇಲಿರಲಿ, ನಾಡು ಸಮೃದ್ಧಿಯಾಗಲಿ ಎಂದು ಆಶಿಸಿದ್ದೇನೆ" ಎಂದು ಅವರು ಬರೆದುಕೊಂಡಿದ್ದಾರೆ. ರಾಜ್ಯದ ವಿವಿಧ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುವುದು ಅವರ ವಾಡಿಕೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬೆಂಗಳೂರಿನ ನಗರ ದೇವತೆ ಶ್ರೀ ಅಣ್ಣಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ರಾಜ್ಯದ ಮುಖ್ಯಮಂತ್ರಿಯಾದರೆ ಅಣ್ಣಮ್ಮದೇವಿ ಸನ್ನಿಧಾನಕ್ಕೆ ಬಂದು ಹರಕೆ ತೀರಿಸುವುದಾಗಿ ಡಿಕೆಶಿ ಹರಕೆ ಹೊತ್ತಿದ್ದರು. ಅದರಂತೆ ನುಡಿದಂತೆ ನಡೆದುಕೊಂಡ ಅವರು, ದೇವಿಗೆ ಉಪ್ಪು, ಮೊಸರು ಅರ್ಪಿಸಿ, ಸುಖ, ಶಾಂತಿ, ನೆಮ್ಮದಿ ನೀಡುವಂತೆ ಪ್ರಾರ್ಥಿಸಿದ್ದರು. ಈ ವೇಳೆ ತಾಯಿ ಅಣ್ಣಮ್ಮಗೆ ನಮಿಸಿ ಆಶೀರ್ವಾದ ಪಡೆದ ಅವರು, ಬಿಸಿಲು ಮಾರಮ್ಮನಿಗೂ ಉಪ್ಪು, ಮೊಸರು ಅರ್ಪಿಸಿ ನಮಿಸಿದ್ದರು.
PublicNext
19/06/2026 12:20 pm