ಮಂಗಳೂರು: ಕೇರಳದ ಇತಿಹಾಸ ಪ್ರಸಿದ್ಧ ಕೊಟ್ಟಿಯೂರು ಕ್ಷೇತ್ರದ ಉತ್ಸವ ಇನ್ನು ಒಂದು ವಾರದೊಳಗೆ ಪೂರ್ಣವಾಗಲಿದೆ. ಜೂನ್ 24ರವರೆಗೆ ವೈಶಾಖ ಮಹೋತ್ಸವ ನಡೆಯಲಿದ್ದು ಪ್ರತಿದಿನ ಬರುವ ಭಕ್ತರ ಸಂಖ್ಯೆ ಇಮ್ಮಡಿಯಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಕ್ಷೇತ್ರಕ್ಕೆ ಈವರೆಗೆ 25 ಲಕ್ಷ ಮಂದಿ ಭೇಟಿ ನೀಡಿದ್ದು, ಭೇಟಿ ನೀಡಿರುವ ಅರ್ಧದಷ್ಟು ಮಂದಿ ಕರ್ನಾಟಕದವರೇ ಆಗಿರೋದು ವಿಶೇಷ.
ಕೊಟ್ಟಿಯೂರು ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕಣ್ಣೂರು ಜಿಲ್ಲೆಯ ಆರ್ಥಿಕತೆ ಬೂಸ್ಟ್ ನೀಡಿದೆ. ಕೊಟ್ಟಿಯೂರು ಕ್ಷೇತ್ರಕ್ಕೆ ಬರುವವರು ಸ್ಥಳೀಯ ಹಲವು ಕ್ಷೇತ್ರಗಳಿಗೆ ಭೇಟಿ ಕೊಡುತ್ತಾರೆ. ಕಣ್ಣೂರಿನ ಪರಶಿನಕಡವು ಮುತ್ತಪ್ಪನ್ ದೇವಸ್ಥಾನ,ತಳಿಪರಂಬ ರಾಜರಾಜೇಶ್ವರ ದೇವಸ್ಥಾನ ಮತ್ತು ಪೇರಳಶ್ಯೇರಿ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಮಾಮನತ್ತಂಬಲಂ,ಮೃದಂಗಶೈಲೇಶ್ವರಿ, ಮತ್ತು ಮಾಡಾಯಿಕ್ಕಾವ್ ಕ್ಷೇತ್ರಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.ಕೇವಲ ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರವಲ್ಲದೇ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ.
ಸಾಮಾನ್ಯವಾಗಿ ಮಳೆಗಾಲವನ್ನು ಪ್ರವಾಸೋದ್ಯಮದ ಆಫ್ ಸೀಸನ್ ಎಂದು ಕರೆಯಲಾಗುತ್ತದೆ. ಆದರೆ ಕೊಟ್ಟಿಯೂರು ಕಾರಣದಿಂದಾಗಿ ಮಳೆಗಾಲದಲ್ಲೇ ಅತೀ ಹೆಚ್ಚಾಗಿ ಜನರು ಬರುತ್ತಿದ್ದು,ಅನಿರೀಕ್ಷಿತ ಲಾಭವನ್ನು ತಂದುಕೊಟ್ಟಿದೆ. ಕರ್ನಾಟಕದ ಭಕ್ತರ ಮಹಾಪೂರ ಹರಿದು ಬರುತ್ತಿರೋದು ಸ್ಥಳೀಯ ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಅನಿರೀಕ್ಷಿತ ಲಾಭ ತಂದುಕೊಟ್ಟಿದೆ.
ಮಳೆ,ನದಿ ,ದಟ್ಟ ಕಾಡು ಹಾಗೂ ಮನುಷ್ಯರು ಸಂಗಮವಾಗುವ ಕೊಟ್ಟಿಯೂರುನ ಅಪರೂಪದ ಆಚರಣೆಗಳು ಹಾಗೂ ಪ್ರಾಕೃತಿಕ ಸೌಂದರ್ಯದ ವಿಡಿಯೋ ಕರ್ನಾಟಕದಲ್ಲಿ ಭಾರೀ ವೈರಲ್ ಆಗಿದ್ದು, ಕೊಟ್ಟಿಯೂರುಗೆ ವಿವಿಧ ಭಾಗದಿಂದ ವಿಶೇಷ ಪ್ರವಾಸ ಪ್ಯಾಕೇಜ್ ಕೂಡಾ ಇದೆ. ಪ್ರಸ್ತುತ ಕರ್ನಾಟಕದ ಹೊರತಾಗಿಯೂ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಿಂದ ತೀರ್ಥ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಟ್ಟಿಯೂರುಗೆ ಆಗಮಿಸುತ್ತಿದ್ದಾರೆ.
ಜೂನ್ 25ರಂದು ಕೊಟ್ಟಿಯೂರುನ ವೈಶಾಖ ಮಹೋತ್ಸವ ಕೊನೆಯಾಗಲಿದ್ದು ಕೊನೆಯ ಎರಡು ದಿನ ಮಹಿಳೆಯರಿಗೆ ಪ್ರವೇಶವಿರೋದಿಲ್ಲ. ಹೀಗಾಗಿ ಮುಂದಿನ ನಾಲ್ಕು ದಿನಗಳಲ್ಲಿ ಭಕ್ತರ ಸಂಖ್ಯೆ ಜಾಸ್ತಿಯಾಗುವ ನಿರೀಕ್ಷೆಗಳಿವೆ.
PublicNext
19/06/2026 05:11 pm